ನಮ್ಮ ಬೆಂಗಳೂರಲ್ಲೂ ಮಹಿಳೆಯರಿಗೆ ರಕ್ಷಣೆಯಿಲ್ಲವೇ?
ಇದು ನಮ್ಮ ಉದ್ಯಾನ ನಗರಿ ಬೆಂಗಳೂರು. ಇಲ್ಲಿ ಎಲ್ಲ ಜಾತಿ, ಮತ, ಧರ್ಮ, ಪಂಥೀಯ ಭೇದ ಭಾವವಿಲ್ಲದೆ ಎಲ್ಲರೂ ಜೀವನವನ್ನು ನಡೆಸುತ್ತಾರೆ. ಕನ್ನಡಿಗರ ಹೃದಯ ವೈಶಾಲತೆಗೆ ಸಾಕ್ಷಿಯೆಂಬಂತೆ ಇಲ್ಲಿಗೆ ಆಗಮಿಸುವ ಎಲ್ಲರನ್ನು ತುಂಬು ಹೃದಯದಿಂದಲೇ ಸ್ವಾಗತಿಸುತ್ತೇವೆ.
ಅಂಥ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೀಗಾಗಬಾರದಿತ್ತು. ಹೌದು, ದೆಹಲಿಯ ಬಸ್ ಗ್ಯಾಂಗ್ ರೇಪ್ ಪ್ರಕರಣ ಮಾಸುವ ಮುನ್ನವೇ ಬೆಂಗಳೂರಿನಲ್ಲೂ ಯುವತಿ ಮೇಲೆ ಅತ್ಯಾಚಾರ ಯತ್ನ ನಡೆದಿದೆ. ಇದು ನಿಜಕ್ಕೂ ಖಂಡನೀಯ. ಅಷ್ಟಕ್ಕೂ ಹದೆಗೆಟ್ಟಿದೆಯೇ ನಮ್ಮ ನಗರ. ಇಲ್ಲಿ ಮಹಿಳೆಯರಿಗೆ ರಕ್ಷಣೆಯಿಲ್ಲವೇ? ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ..

ಘಟನೆ ವಿವರ
ಬಿಎಂಟಿಸಿ ಬಸ್ ಚಾಲಕನೊಬ್ಬ ಬಸ್ಸಿನಲ್ಲೇ ಪಂಜಾಬ್ ಮೂಲದ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಪ್ರಕರಣ ಸಂಬಂಧ ಚಾಮರಾಜಪೇಟೆ ಪೊಲೀಸರು ಸಿದ್ಧಾರ್ಥ್ ಎಂಬ ಚಾಲಕರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ನಗರದ ಖಾಸಗಿ ಕಂಪನಿಯಲ್ಲಿ ದುಡಿಯುತ್ತಿರುವ ಯುವತಿ, ಪುಷ್ಫಕ್ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬಸ್ ಚಾಲಕ ಹಾಗೂ ನಿರ್ವಾಹಕನಾಗಿರುವ ಸಿದ್ಧಾರ್ಥ್ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವುದಾಗಿ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಮೆಜೆಸ್ಟಿಕ್ನಿಂದ ಪದ್ಮನಾಭನಗರಕ್ಕೆ ಹೋಗಲು ಬಸ್ ಹತ್ತಿದ್ದ ಈಕೆಯ ಮೇಲೆ ಚಾಲಕ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದ್ದಾನೆ. ಈ ವೇಳೆ ಯುವತಿ ಆತ್ಮ ರಕ್ಷಣೆಗಾಗಿ ಚಾಲಕನ ಕೈ ಕಚ್ಚಿದ್ದು, ಇದರಿಂದ ಗಾಬರಿಗೊಂಡ ಚಾಲಕ ಮೊಬೈಲ್, ಬ್ಯಾಗ್, ಹಣ ಕಿತ್ತೊಗೆದು ಆಕೆಯನ್ನು ಬಸ್ಸಿನಿಂದ ಕೆಳಕ್ಕೆ ತಳ್ಳಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ನಮ್ಮ ನಗರದ ಬಸ್ಸಿನಲ್ಲಿ ಪಯಣಿಸುವ ಮಹಿಳಾ ಪ್ರಯಾಣಿಕರಿಗೆ ಸೂಕ್ತ ಭದ್ರತೆ ಇಲ್ಲದಂತಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ.

ರಾತ್ರೆ ವೇಳೆಯಲ್ಲಿ ಬಸ್ಸಿನಲ್ಲಿ ಪ್ರಯಾಣಿಸುವ ಪ್ರಸಂಗವನ್ನು ಮಹಿಳೆಯರು ಸಾಧ್ಯವಾದಷ್ಟು ಕಡೆಗಣಿಸಿದರೆ ಒಳಿತು. ಹಾಗೆಯೇ ಇನ್ನು ಮುಂದೆಯಾದರೂ ಇಂತಹ ಘಟನೆ ಘಟಿಸದಿರಲಿ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂಬುದೇ ನಮ್ಮ ಆಶಯ.


Click it and Unblock the Notifications








