ಬಂದಿದೆ ಹೊಸ ರೂಲ್ಸ್- ಸೆಕೆಂಡ್ ಹ್ಯಾಂಡ್ ವಾಹನಗಳ ಖರೀದಿಗೂ ಮುನ್ನ ಹುಷಾರ್..!!
ಸೆಕೆಂಡ್ ಹ್ಯಾಂಡ್ ವಾಹನಗಳ ಖರೀದಿ ಮತ್ತು ಮಾರಾಟ ಪ್ರಕ್ರಿಯೆ ಮೇಲೆ ಹೊಸ ಕಾನೂನು ಜಾರಿಗೊಳಿಸಲಾಗಿದ್ದು, ಹೊಸ ನಿಯಮ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ಪ್ರತಿಯೊಬ್ಬರಿಗೂ ತಮ್ಮದೇ ಸ್ವಂತ ವಾಹನ ಹೊಂದಬೇಕೆಂಬ ಆಸೆ ಇದ್ದೆ ಇರುತ್ತೆ. ಆದ್ರೆ ತಮ್ಮ ಬಜೆಟ್ಗೆ ತಕ್ಕಂತೆ ವಾಹನ ಖರೀದಿ ಮಾಡುವ ಕೆಲವರು, ಸೆಕೆಂಡ್ ಹ್ಯಾಂಡ್ ವಾಹನಗಳ ಖರೀದಿಗೆ ಮುಂದಾಗುವುದು ಕಾಮನ್. ಆದ್ರೆ ಅಂತಹ ವಾಹನಗಳ ಖರೀದಿಗೂ ಮುನ್ನ ಈ ಲೇಖನವನ್ನು ಒಮ್ಮೆ ಪೂರ್ತಿ ಓದಿ.

ನಗರ ಪ್ರದೇಶಗಳಲ್ಲಿ ದ್ಪಿಚಕ್ರ ಮತ್ತು ಕಾರುಗಳ ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಪರಾಧಗಳನ್ನು ತಡೆಗಟ್ಟಲು ಪೊಲೀಸರು ಹರಸಾಹಸ ಪಡುವಂತಾಗಿದೆ.

ಇದಕ್ಕಾಗಿ ಸೆಕೆಂಡ್ ಹ್ಯಾಂಡ್ ವಾಹನಗಳ ಮಾರಾಟ ಮತ್ತು ಖರೀದಿ ಮೇಲೆ ಕೆಲವು ಹೊಸ ಕಾನೂನುಗಳನ್ನು ಜಾರಿಗೊಳಿಸಲಾಗಿದ್ದು, ಹೊಸ ರೂಲ್ಸ್ ಅನುಸರಿಸದೇ ಯಾವುದೇ ವಾಹನ ಖರೀದಿ ಮಾಡಬೇಡಿ.

ಹೊಸ ರೂಲ್ಸ್ ಏನ್ ಹೇಳುತ್ತೆ?
ಜಾರಿಯಾಗಿರುವ ಹೊಸ ರೂಲ್ಸ್ ಪ್ರಕಾರ ಮಾರಾಟ ಮಾಡುತ್ತಿರುವ ಹಳೆ ವಾಹನದ ಇನ್ಸೂರೆನ್ಸ್ ಮೇಲೆ ನಿರಾಕ್ಷೇಪಣಾ ಪ್ರಮಾಣ ಪತ್ರ (ಎನ್ಒಸಿ) ಕಡ್ಡಾಯವಾಗಿದೆ.

ಒಂದು ವೇಳೆ ಹಳೆ ವಾಹನದ ಇನ್ಸೂರೆನ್ಸ್ ಮೇಲಿನ ನಿರಾಕ್ಷೇಪಣಾ ಪ್ರಮಾಣ ಪತ್ರ ಇಲ್ಲದೇ ವಾಹನ ಮಾರಾಟ ಮತ್ತು ಖರೀದಿ ಮಾಡಿದ್ದಲ್ಲಿ ನೀವು ತೊಂದರೆಗೆ ಸಿಲುಕುವುದು ಗ್ಯಾರಂಟಿ.

ಎನ್ಒಸಿ ಪ್ರಮಾಣ ಪತ್ರ ಪಡಿಯೋದು ಹೇಗೆ?
ನೀವು ವಾಹನ ಖರೀದಿ ಮಾಡುವ ಮುನ್ನ ಯಾವು ಕಂಪನಿಯಲ್ಲಿ ವಿಮೆ ಮಾಡಿಸಲಾಗಿದೆಯೋ ಅದೇ ಕಂಪನಿ ನಿಮಗೆ ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡುತ್ತದೆ.

ಹೊಸ ಕಾನೂನಿನಿಂದ ಏನ್ ಪ್ರಯೋಜನ?
ಹೌದು ಹೊಸ ಕಾನೂನಿನಿಂದ ಹತ್ತಾರು ಉಪಯೋಗಗಳಿದ್ದು, ಸೆಕೆಂಡ್ ಹ್ಯಾಂಡ್ ವಾಹನಗಳ ಮಾರಾಟ ಮತ್ತು ಖರೀದಿ ಕಾನೂನು ಬದ್ದವಾಗಿರುತ್ತದೆ.

ಕಳ್ಳತನ ಪ್ರಕರಣಗಳಿಗೆ ಬ್ರೇಕ್?
ಹೆಚ್ಚುತ್ತಿರುವ ವಾಹನಗಳ ಕಳ್ಳತನ ಪ್ರಕರಣಗಳನ್ನು ತಡೆಯುವ ಉದ್ದೇಶದಿಂದಲೇ ಈ ನಿಯಮ ಜಾರಿಗೆ ತರಲಾಗಿದ್ದು, ಕದ್ದ ವಾಹನಗಳನ್ನು ಮೋಸದಿಂದ ಮಾರಾಟ ಮಾರಾಟ ಮಾಡುವುದು ತಗ್ಗಲಿದೆ.

ಇನ್ಸೂರೆನ್ಸ್ ಕಂಪಿನಿಗಳಿಗೆ ಖಡಕ್ ಸೂಚನೆ
ಇನ್ನು ಹೊಸ ನಿಯಮ ಜಾರಿಗೂ ಮುನ್ನ ಪ್ರಮುಖ ಇನ್ಸೂರೆನ್ಸ್ ಕಂಪನಿಗಳ ಜೊತೆ ಚರ್ಚೆ ನಡೆಸಿರುವ ಹಿರಿಯ ಪೊಲೀಸರು ಅಧಿಕಾರಿಗಳು, ಅಪರಾಧ ತಡೆಯಲು ಕೆಲವು ಕಠಿಣ ಕ್ರಮ ಅಗತ್ಯವಿದೆ ಎಂದಿದ್ದಾರೆ.

ಕದ್ದ ವಾಹನಗಳಿಗೆ ಸಂಕಷ್ಟ
ಹೊಸ ನಿಯಮದಿಂದಾಗಿ ಸೆಕೆಂಡ್ ಹ್ಯಾಂಡ್ ವಾಹನಗಳ ಬಳಕೆ ಕೂಡಾ ತಗ್ಗುವ ಸಾಧ್ಯತೆಗಳಿವೆ. ಇದಲ್ಲದೇ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಎನ್ಒಸಿ ಪ್ರಮಾಣ ಪತ್ರ ತೋರಿಸಬೇಕಿದ್ದು, ಕಳ್ಳತನ ಮಾಡಿ ಮಾರಾಟ ಮಾಡಿರುವ ವಾಹನಗಳು ಸಲೀಸ್ ಆಗಿ ಸಿಕ್ಕಿಬಿಳ್ಳುತ್ತವೆ.

ದೆಹಲಿಯಲ್ಲೇ ಅತಿಹೆಚ್ಚು ಕಳ್ಳತನ
ರಾಷ್ಟ್ರ ರಾಜಧಾನಿ ದೆಹಲಿಯಲ್ಲೇ ದಿನನಿತ್ಯ ನೂರಾರು ಐಷಾರಾಮಿ ಮತ್ತು ಸಾಮಾನ್ಯ ವಾಹನಗಳು ಕಳ್ಳತನವಾಗುತ್ತಿದ್ದು, ಗುರುಗ್ರಾಮ್ ಮತ್ತು ಹರಿಯಾಣದಲ್ಲಿ ಇವುಗಳನ್ನು ಹೆಚ್ಚಾಗಿ ಮಾರಾಟ ಮಾಡಲಾಗುತ್ತದೆ.

ಬೆಂಗಳೂರಿನಲ್ಲೂ ನಿಲ್ಲದ ವಾಹನ ಕಳ್ಳತನ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ವಾಹನ ಕಳ್ಳತನ ಹೆಚ್ಚಾಗಿದ್ದು, ವಾಹನ ಸವಾರು ಕಂಗಾಲಾಗಿದ್ದಾರೆ. ಕದ್ದ ವಾಹನಗಳ ಬಿಡಿ ಭಾಗಗಳನ್ನು ನಗರದ ಪ್ರಮುಖ ಕಡೆಗಳಲ್ಲಿ ಮಾರಾಟ ಕೂಡಾ ಮಾಡಲಾಗುತ್ತೆ.

ಖರೀದಿಗೂ ಮುನ್ನ ಹುಷಾರ್
ಯಾವುದೇ ಕಾರಣಕ್ಕೂ ಸೂಕ್ತ ದಾಖಲೆಗಳಿಲ್ಲದ ಸೆಕೆಂಡ್ ಹ್ಯಾಂಡ್ ವಾಹನಗಳ ಖರೀದಿ ಬೇಡವೇ ಬೇಡ. ಖರೀದಿಗೂ ಮುನ್ನ ವಿಮಾ ಕಂಪನಿಗಳಿಂದ ಎನ್ಒಸಿ ಪ್ರಮಾಣ ಪತ್ರ ಪಡೆದಿದ್ದರೇ ಮಾತ್ರ ಖರೀದಿ ಮಾಡಿ.

ಇನ್ನು ದೆಹಲಿಯಲ್ಲಿ ಈ ಕಾಯ್ದೆಯನ್ನು ಈಗಾಗಲೇ ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದ್ದು, ಬೆಂಗಳೂರು ಸೇರಿದಂತೆ ಪ್ರಮುಖ ಮೆಟ್ರೋ ಸಿಟಿಗಳಲ್ಲಿ ಹಂತ ಹಂತವಾಗಿ ಜಾರಿಗೆಯಾಗಲಿದೆ.

ಹೊಸ ನಿಯಮದಿಂದ ಕಳ್ಳತನ ಪ್ರಕರಣಗಳು ಎಷ್ಟರ ಮಟ್ಟಿಗೆ ತಗ್ಗುವೋ ಗೊತ್ತಿಲ್ಲ ಒಟ್ಟಿನಲ್ಲಿ ಸೆಕೆಂಡ್ ವಾಹನಗಳ ಖರೀದಿ ಮೇಲೆ ಭದ್ರತೆ ಸಿಗಲಿದೆ.

ಥರ್ಡ್ ಪಾರ್ಟಿ ವಿಮೆ ಮೇಲಿನ ಶುಲ್ಕ ಹಠಾತ್ ಕಡಿತ
ಈ ನಡುವೆ ದೇಶದ ವಿಮೆ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರ ಸಂಸ್ಥೆಯು ಕಳೆದ ಕೆಲ ದಿನಗಳ ಹಿಂದೆ ವಾಹನಗಳ ಮೇಲಿನ ‘ಥರ್ಡ್ ಪಾರ್ಟಿ' ವಿಮೆ ದರಗಳನ್ನು ಪರಿಷ್ಕರಿಸಿದೆ.

ಸರಕು ಸಾಗಣೆ ವಾಹನ, ದ್ವಿಚಕ್ರ ವಾಹನ ಮತ್ತು ಕಾರುಗಳ ಮೇಲಿನ 'ಥರ್ಡ್ ಪಾರ್ಟಿ ವಿಮೆಯನ್ನು 'ಐಆರ್ಡಿಎಐ' ಇಳಿಕೆ ಮಾಡಿದ್ದು, ಮಾರ್ಚ್ 28ರಂದು ಪ್ರಕಟಿಸಿದ್ದ ದರಗಳಲ್ಲಿ ಈಗ ಕಡಿತ ಮಾಡಲಾಗಿದೆ.

ಪ್ರತಿ ವರ್ಷವೂ ಸಹ ವಾಹನಗಳ ಮೇಲಿನ ‘ಥರ್ಡ್ ಪಾರ್ಟಿ' ವಿಮೆಯನ್ನು ‘ಐಆರ್ಡಿಎಐ' ಪರಿಷ್ಕರಿಸುತ್ತದೆ, ಅದೇ ರೀತಿ ಈ ವರ್ಷವೂ ಸಹ ಭಾರತದ ದೇಶದ ವಿಮೆ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರ ವಿಮೆಯ ದರಗಳನ್ನು ಪರಿಷ್ಕರಿಸಿದೆ.

ಸಾರ್ವಜನಿಕ ಸಾರಿಗೆ ವಾಹನಗಳು (ಮೂರು ಚಕ್ರದ ವಾಹನ ಹೊರತುಪಡಿಸಿ) ಮತ್ತು ಸರಕು ಸಾಗಾಣಿಕೆ ವಾಹನಗಳ ಮೇಲಿನ ವಿಮೆ ದರಗಳನ್ನು ಹೆಚ್ಚಿನ ಮಟ್ಟದಲ್ಲಿ ಇಳಿಕೆ ಮಾಡಿರುವುದು ಸ್ವಾಗತಾರ್ಹ ಬೆಳೆವಣಿಗೆಯಾಗಿದೆ.

‘ಥರ್ಡ್ ಪಾರ್ಟಿ' ವಿಮೆಯನ್ನು ಇಳಿಕೆ ಮಾಡಿದ್ದರೂ ಸಹ ವಿಮೆ ಕಂತಿನ ದರಗಳು ಹಿಂದಿನ ವರ್ಷದ ದರಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇವೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು. ಕಳೆದ ವರ್ಷ ರೂ. 15,365 ಇದ್ದ ವಿಮೆ ದರ ರೂ. 24.708 ವರೆಗೆ ಹೆಚ್ಚಿಗೆಯಾಗಿದೆ.

ಥರ್ಡ್ ಪಾರ್ಟಿ ಆದ್ರೆ ಏನು ?
ಯಾವುದೇ ವಾಹನದಿಂದ ಹಾನಿಗೆ ಒಳಗಾದ ಸ್ವತ್ತು ಮತ್ತು ವ್ಯಕ್ತಿಗಳಿಗೆ ಪರಿಹಾರ ಒದಗಿಸುವ ವಿಮೆಯು ‘ಥರ್ಡ್ ಪಾರ್ಟಿ' ವಿಮೆ ಆಗಿರುತ್ತದೆ. ಎಲ್ಲ ಬಗೆಯ ವಾಹನಗಳಿಗೆ ಥರ್ಡ್ಪಾರ್ಟಿ ವಿಮೆ ಕಡ್ಡಾಯವಾಗಿದೆ.

ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಈ ವಿಮೆ ಸೌಲಭ್ಯವು ವಾಹನದ ಮಾಲೀಕನಿಗೆ ಮತ್ತು ವಾಹನಕ್ಕೆ ಅನ್ವಯಿಸುವುದಿಲ್ಲ. ಮೂರನೇ ವ್ಯಕ್ತಿಗೆ ಆದ ಗಾಯ, ಸಾವು ಅಥವಾ ಸ್ವತ್ತು ನಷ್ಟದ ಪರಿಹಾರಕ್ಕೆ ಸಂಬಂಧಿಸಿರುತ್ತದೆ.

ಒಟ್ಟಿನಲ್ಲಿ ಸೆಕೆಂಡ್ ವಾಹನಗಳ ಖರೀದಿಗೆ ವಿಮೆ ಕಂಪನಿಗಳು ನೀಡುವ ನಿರಾಕ್ಷೇಪಣಾ ಪತ್ರ(ಎನ್ಒಸಿ) ಹೊಂದುವುದು ಅವಶ್ಯಕತೆಯಿದ್ದು, ಪ್ರತಿಯೊಬ್ಬರು ಇದರ ಬಗ್ಗೆ ಜಾಗೃತಿ ವಹಿಸುವುದು ಒಳ್ಳೆಯದು.

ಇತ್ತೀಚಿಗೆ ಮಾರ್ಪಾಡು ಮಾಡಲಾದ ಮೋಟಾರ್ ಕಾಯ್ದೆಯ ವಿವರ ಇಲ್ಲಿದೆ.
ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ಹೊಸ ಮೋಟಾರ್ ಕಾಯ್ದೆಗೆ ಲೋಕಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ ದೊರೆತಿದೆ. ಇದರಿಂದಾಗಿ ರಸ್ತೆ ನಿಯಮ ಉಲ್ಲಂಘನೆ ಮಾಡುವ ಮುನ್ನ ಹೊಸ ಕಾಯ್ದೆ ಬಗ್ಗೆ ತಿಳಿದುಕೊಳ್ಳುವುದು ಒಳಿತು.

ಯಾವುದಕ್ಕೆ ಎಷ್ಟು ದಂಡ?
1. ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಾಲನೆ ಮಾಡಿದ್ರೆ ರೂ.5 ಸಾವಿರ ದಂಡ ಕಟ್ಟಬೇಕಿದೆ. ಈ ಹಿಂದೆ ಇದ್ದ ದಂಡದ ಮೊತ್ತವನ್ನು 1 ಸಾವಿರದಿಂದ 5 ಸಾವಿರಕ್ಕೆ ಹೆಚ್ಚಿಸಲಾಗಿದ್ದು, ಇನ್ನು ಲೈಸೆನ್ಸ್ ಇಲ್ಲದೇ ವಾಹನ ಚಾಲನೆ ಮಾಡುವುದು ಅಷ್ಟು ಸುಲಭವಲ್ಲ.

2. ಸಿಗ್ನಲ್ ಜಂಪ್ ಮಾಡಿದರೆ
ಇನ್ಮುಂದೆ ಸಿಗ್ನಲ್ ಜಂಪ್ ಮಾಡುವ ಮತ್ತೊಮ್ಮೆ ಯೋಚನೆ ಮಾಡಿ. ಯಾಕೇಂದ್ರೆ ಈ ಹಿಂದೆ ಇದ್ದ ರೂ.200 ದಂಡವನ್ನು 1 ಸಾವಿರಕ್ಕೆ ಹೆಚ್ಚಿಸಲಾಗಿದೆ.

3. ಕುಡಿದು ವಾಹನ ಓಡಿಸಿದರೆ
ದಯವಿಟ್ಟು ಕುಡಿದು ವಾಹನ ಓಡಿಸಲೇಬೇಡಿ. ಯಾಕೇಂದ್ರೆ ಅದು ನಿಮಗೆ ಅಷ್ಚೇ ಅಲ್ಲ ಇತರರ ಜೀವಕ್ಕೂ ಅಪಾಯ. ಹೀಗಾಗಿ ಕಠಿಣ ಕಾನೂನು ಜಾರಿಗೆ ತಂದಿರುವ ಕೇಂದ್ರ ಸರ್ಕಾರ ದಂಡದ ಮೊತ್ತವನ್ನು 2 ಸಾವಿರದಿಂದ 10 ಸಾವಿರಕ್ಕೆ ಹೆಚ್ಚಿಸಿದೆ. ಜತೆಗೆ ಅಂಥವರಿಗೆ 10 ವರ್ಷಗಳವರೆಗಿನ ಸೆರೆವಾಸ ಶಿಕ್ಷೆಯೂ ಕಾದಿದೆ.

4. ಹೆಲ್ಮೆಟ್ ಮತ್ತು ಸೀಟ್ಬೆಲ್ಟ್
ಹೆಲ್ಮೆಟ್ ಮತ್ತು ಸೀಟ್ಬೆಲ್ಟ್ ಇಲ್ಲದೇ ಪ್ರಮಾಣ ಭಾರೀ ದಂಡಕ್ಕೆ ಆಹ್ವಾನ. ಕಾರಣ ಈ ಹಿಂದಿನ ದಂಡದ ಮೊತ್ತವನ್ನು ರೂ.100ರಿಂದ 1 ಸಾವಿರಕ್ಕೆ ಹೆಚ್ಟಿಸಲಾಗಿದೆ.

5. ವಿಮೆ ಇಲ್ಲದಿದ್ದರೆ
ಹೊಸ ವಾಹನ ಖರೀದಿ ಮಾಡಿದಾಗ ತಪ್ಪದೇ ವಿಮೆ ಮಾಡಿಸಿ. ಇಲ್ಲವಾದಲ್ಲಿ ರೂ.2 ಸಾವಿರ ದಂಡ ತೇರಬೇಕಾಗುತ್ತೆ. ಜೊತೆಗೆ ಚಾಲನ ಪರವಾನಗಿ ನಿಯಮಗಳನ್ನು ಉಲ್ಲಂಘಿಸಿದ್ರೆ ೨೫ ಸಾವಿರದಿಂದ 1 ಲಕ್ಷದವರೆಗೂ ದಂಡ ತೆರಬೇಕಾಗುತ್ತೆ.

6. ಚಲನೆಯ ಮಧ್ಯೆ ಮೊಬೈಲ್ ಬಳಕೆ
ಮೊಬೈಲ್ನಲ್ಲಿ ಮಾತನಾಡುತ್ತಾ ವಾಹನ ಚಾಲನೆಯನ್ನು ಮಾಡುವುದನ್ನು ಕಡಿಮೆ ಮಾಡಿ. ಇಲ್ಲವಾದಲ್ಲಿ ಈ ಹಿಂದೆ ಇದ್ದ 1 ಸಾವಿರ ರೂಪಾಯಿ ದಂಡವನ್ನು ಇದೀಗ ರೂ. 5 ಸಾವಿರಕ್ಕೆ ಹೆಚ್ಚಿಸಲಾಗಿದ್ದು, ನಿಮ್ಮ ಜೇಬಿಗೆ ಕತ್ತರಿ ಬಿಳಲಿದೆ.

7. ಆಂಬ್ಯುಲೆನ್ಸ್ಗೆ ದಾರಿ ಬಿಡದೆ ಇದ್ದರೆ
ಈ ಬಾರಿ ಹೊಸ ಮೋಟಾರು ವಾಹನ ಕಾಯ್ದೆಯಲ್ಲಿ ಮೂರು ಹೊಸ ಕಾನೂನು ತಿದ್ದುಪಡಿ ತರಲಾಗಿದೆ. ಒಂದು ವೇಳೆ ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್ಗೆ ದಾರಿ ಬಿಡದಿದ್ರೆ 10 ಸಾವಿರ ತೆತ್ತಬೇಕಾಗುತ್ತೆ.

8. ವೇಗದ ಚಾಲನೆ
ಸಾರ್ವಜನಿಕ ಪ್ರದೇಶಗಳಲ್ಲಿ ಅತಿ ವೇಗದ ಚಾಲನೆಗೂ ಮುನ್ನ ಹುಷಾರ್ ಆಗಿ ಇರಿ. ಇಲ್ಲವಾದ್ರೆ ಹೊಸ ಕಾಯ್ದೆ ಪ್ರಕಾರ 2 ಸಾವಿರ ರೂ. ದಂಡ ಪಾವತಿಸಬೇಕಾಗುತ್ತೆ.

9. ಅಪ್ರಾಪ್ತ ಮಕ್ಕಳ ವಾಹನ ಚಲನೆಗೆ
ಪಾಲಕರು ತಮ್ಮ ಮಕ್ಕಳಿಗೆ ಬೈಕ್, ಕಾರು ನೀಡುವ ಮುನ್ನ ಮೊತ್ತೊಮ್ಮೆ ಯೋಚಿಸಿ. ಯಾಕೇಂದ್ರೆ ಮೋಟಾರ್ ಕಾಯ್ದೆಯಲ್ಲಿ ಹೊಸ ತಿದ್ದುಪಡಿ ತರಲಾಗಿದ್ದು, ಅಪ್ರಾಪ್ತರು ಗಾಡಿ ಓಡಿಸಿದ್ರೆ, ವಾಹನ ಮಾಲೀಕರಿಗೆ 25 ಸಾವಿರ ದಂಡ ಮತ್ತು 2 ಜೈಲಿಗೆ ಹೋಗಬೇಕಾಗುತ್ತೆ.

10. ಹೆವಿ ಲೋಡ್ ವಾಹನಕ್ಕೆ
ಸರಕು ಸಾಗಾಣಿಕೆ ವಾಹನಗಳಿಗೆ ಹೆವೀ ಲೋಡ್ ಹಾಕಲೇಬೇಡಿ. ಈ ನಿಯಮ ಉಲ್ಲಂಘನೆ ಮಾಡಿದ್ರೆ 20 ಸಾವಿರ ದಂಡದ ಜೊತೆಗೆ ಪ್ರತಿ ಟನ್ಗೂ 2 ಸಾವಿರ ಎಕ್ಸ್ಟ್ರಾ ಫೈನ್ ಕಟ್ಟಬೇಕಾಗುತ್ತೆ.

11. ಮಾಡಿಫೈ ಮಾಡಿರುವ ವಾಹನಗಳಿಗೆ
ನೀವು ಮಾಡಿಫೈ ವಾಹನಗಳ ಪ್ರಿಯರಾಗಿದ್ದರೇ ಎಚ್ಚೆತ್ತುಕೊಳ್ಳುವುದು ಒಳಿತು. ಇಲ್ಲವಾದ್ರೆ ವಾಹನದ ಅಸಲಿ ನಿರ್ಮಾಣ ಕವಚ ಬದಲಿಸಿದ್ರೆ 5 ಸಾವಿರ ರೂ. ದಂಡ ಬಿಳಲಿದೆ.

12. ಟಿಕೆಟ್ ರಹಿತ ಪ್ರಯಾಣಕ್ಕೆ
ಬಸ್ ಮತ್ತು ರೈಲ್ವೆಗಳಲ್ಲಿ ಟಿಕೆಟ್ ಇಲ್ಲದ ಪ್ರಯಾಣ ಇನ್ಮುಂದೆ ಭಾರೀ ದಂಡಕ್ಕೆ ಆಹ್ವಾನ. ಹೌದು ಇನ್ನು ಯಾವುದೇ ಕಾರಣಕ್ಕೂ ಟಿಕೆಟ್ ಇಲ್ಲದೇ ಪ್ರಯಾಣ ಮಾಡಬೇಡಿ ಇಲ್ಲವಾದ್ರೆ ರೂ.200 ಬದಲು ರೂ.500 ದಂಡ ತೆರಬೇಕಾಗುತ್ತೆ.

13. ಅಪಘಾತ ಪರಿಹಾರ
ಅಪಘಾತಗಳ ತಡೆಗೆ ಕೇಂದ್ರ ಸರ್ಕಾರ ಭಾರೀ ಪ್ರಮಾಣದ ದಂಡ ರೂಪಿಸಿದೆ. ಒಂದು ವೇಳೆ ಅಪಘಾತದಲ್ಲಿ ವ್ಯಕ್ತಿ ಸಾವನ್ನಪ್ಪಿದ್ರೆ ೧೦ ಲಕ್ಷ ರೂ ಪರಿಹಾರ ನೀಡಬೇಕಾಗಿದ್ದು, ಗಾಯಗೊಂಡವರಿಗೆ ೫ ಲಕ್ಷ ಪರಿಹಾರ ಪಾವತಿಸಬೇಕಾಗುತ್ತದೆ.

14. ಹಿಟ್ ಅಂಡ್ ರನ್
ಇನ್ಮುಂದೆ ಹಿಟ್ ಆ್ಯಂಡ್ ರನ್ ಮಾಡಿ ಮನೆ ಸೇರೋ ಹಾಗಿಲ್ಲ. ಯಾಕೇಂದ್ರೆ ಹೊಸ ಕಾನೂನಿನ ಪ್ರಕಾರ ಗುದ್ದೋಡಿದ ಪ್ರಕರಣದಲ್ಲಿ ಸಾವನ್ನಪ್ಪಿದ ವ್ಯಕ್ತಿಗೆ 2 ಲಕ್ಷ ರೂಪಾಯಿ ಪರಿಹಾರ ನೀಡಬೇಕಿದೆ. ಜೊತೆಗೆ ಗಾಯಾಳುವಿಗೆ 50 ಸಾವಿರ ಪರಿಹಾರ ಪಾವತಿಸಬೇಕು.

15. ಬೈಕ್ ವಿಲ್ಹೀಂಗ್
ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಬೈಕ್ ವಿಲ್ಹೀಂಗ್ ಪ್ರಕರಣ ಹೆಚ್ಚಾಗುತ್ತಿವೆ. ಹೀಗಾಗಿ ಇಂತಹ ಪ್ರಕರಣಗಳನ್ನು ತಡೆಯಲು ಕೇಂದ್ರ ಸರ್ಕಾರ ಈ ಹಿಂದೆ ಇದ್ದ ದಂಡದ ಮೊತ್ತವನ್ನು 1 ಸಾವಿರದಿಂದ 10 ಸಾವಿರಕ್ಕೆ ಏರಿಕೆ ಮಾಡಿದೆ.

16. ಆಧಾರ್ ಕಾರ್ಡ್ ಲಿಂಕ್
ಮೇಲಿನ ಕಠಿಣ ಕ್ರಮಗಳಲ್ಲದೇ ಡ್ರೈವಿಂಗ್ ಲೈಸೆನ್ಸ್ ಬೇಕಂದ್ರೆ ಆಧಾರ್ ಕಾರ್ಡ್ ಲಿಂಕ್ ಮಾಡಲೇಬೇಕೇಂಬ ಹೊಸ ನಿಯಮ ಜಾರಿಗೆ ತರಲಾಗಿದೆ. ಜೊತೆಗೆ 10 ವರ್ಷ ಮೇಲ್ಪಟ್ಟ ಮಕ್ಕಳಿಗೆ ಉತ್ಕೃಷ್ಟ ಗುಣಮಟ್ಟದ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ.

17. ವಿಐಪಿ ಮತ್ತು ರಾಜಕಾರಣಿಗಳಿಗೆ ಡಿಎಲ್ ಕಡ್ಡಾಯ
ಮತ್ತೊಂದು ಪ್ರಮುಖ ವಿಚಾರವೇಂದರೆ ಮೊಟ್ಟ ಮೊದಲ ಬಾರಿಗೆ ರಾಜಕಾರಣಿಗಳು ಮತ್ತು ವಿಐಪಿಗಳಿಗಳು ಡಿಎಲ್ ಪಡೆಯಲು ಟೆಸ್ಟ್ ಡ್ರೈವ್ ಕಡ್ಡಾಯಗೊಳಿಸಲಾಗಿದೆ.


Click it and Unblock the Notifications








