ಟ್ರಾಫಿಕ್ ರೂಲ್ಸ್ ಫಾಲೋ ಮಾಡಿದ್ರೆ ಫುಡ್ ಖರೀದಿ ಮೇಲೆ ಡಿಸ್ಕೌಂಟ್
ವಿಶ್ವದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಒಂದಾದ ಭಾರತದಲ್ಲಿ, ಸಾರ್ವಜನಿಕ ರಸ್ತೆಗಳು ಭಯಾನಕ ಅನುಭವವನ್ನು ನೀಡುತ್ತವೆ. ಹೆಚ್ಚುತ್ತಿರುವ ವಾಹನಗಳು ಹಾಗೂ ಜನರು ನಿಯಮಗಳನ್ನು ಪಾಲಿಸದ ಕಾರಣ, ರಸ್ತೆಗಳಲ್ಲಿ ಸದಾ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಪೀಕ್ ಅವರ್ ಸಮಯದಲ್ಲಿ ಹೆಚ್ಚಿನ ದಟ್ಟಣೆ ಉಂಟಾಗುತ್ತದೆ. ಈ ಹಿಂದೆ, ಟ್ರಾಫಿಕ್ ಪೊಲೀಸರು ಹಾಗೂ ಸ್ಥಳೀಯ ಆಡಳಿತ ವಿವಿಧ ನಿಯಮ ಹಾಗೂ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನ ಪಟ್ಟಿದ್ದರೂ ಪರಿಸ್ಥಿತಿ ಇನ್ನೂ ಬದಲಾಗಿಲ್ಲ.

ಈ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮಹಾರಾಷ್ಟ್ರದ ಪುಣೆಯ ನಗರ ಸಂಚಾರ ಪೊಲೀಸರು ಹೊಸ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ. ಪುಣೆಯಲ್ಲಿ ವಾಸಿಸುವವರಿಗೆ ಫುಡ್ ಕೂಪನ್ಗಳನ್ನು ಬಹುಮಾನವಾಗಿ ನೀಡಲು ಪೊಲೀಸರು ಸ್ವಿಗಿ ಮತ್ತು ಜೊಮಾಟೊದಂತಹ ಆನ್ಲೈನ್ ಫುಡ್ ವಿತರಣಾ ಸಂಸ್ಥೆಗಳೊಂಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಕಾನೂನು ಉಲ್ಲಂಘಿಸುವವರಿಗೆ ದಂಡಗಳನ್ನು ವಿಧಿಸಿದರೆ, ಕಾನೂನು ಪಾಲಿಸುವವರಿಗೆ ಬಹುಮಾನವನ್ನು ನೀಡಲಾಗುವುದು.

ಟ್ರಾಫಿಕ್ ಪೊಲೀಸರು ಕಾನೂನು ಪಾಲಿಸುವ ಪ್ರಯಾಣಿಕರು ಹಾಗೂ ವಾಹನ ಸವಾರರನ್ನು ಪತ್ತೆ ಹಚ್ಚಿ ಅವರಿಗೆ 50% ಡಿಸ್ಕೌಂಟ್ನ ಕೂಪನ್ಗಳನ್ನು ಸ್ಥಳದಲ್ಲಿಯೇ ನೀಡುವರು. ಈ ಕೂಪನ್ಗಳನ್ನು ಜೊಮಾಟೊ ಹಾಗೂ ಸ್ವಿಗ್ಗಿಯಂತಹ ಆನ್ಲೈನ್ ಆಹಾರ ವಿತರಣಾ ಕೇಂದ್ರಗಳಲ್ಲಿ ಬಳಸಬಹುದು. ಈ ವರ್ಷದ ಜೂನ್ 14 ರಂದು ಕಾರ್ಯರೂಪಕ್ಕೆ ಬಂದ ಆಬರ್ ಯೋಜನೆಯಡಿಯಲ್ಲಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಇಟ್ಟುಕೊಳ್ಳುವ ವಾಹನ ಚಾಲಕರಿಗೆ ಬಹುಮಾನ ನೀಡಲು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಪೊಲೀಸರು ವಾಹನ ಚಾಲಕರನ್ನು ಯಾವುದಾದರೂ ಸ್ಥಳಗಳಲ್ಲಿ ನಿಲ್ಲಿಸಿ ದಾಖಲೆಗಳನ್ನು ಕೇಳಿದಾಗ, ಅವರು ದಾಖಲೆಗಳನ್ನು ತೋರಿಸಿದರೆ ಪೊಲೀಸರು ಅವರಿಗೆ 10 ಅಂಕಿಯ ಕೂಪನ್ಗಳನ್ನು ನೀಡಲಿದ್ದಾರೆ. ಈ ಕೂಪನ್ಗಳ ಕೋಡ್ ಅನ್ನು ನೇರವಾಗಿ ವಾಹನ ಸವಾರರ ಮೊಬೈಲ್ ನಂಬರ್ಗಳಿಗೆ ಕಳುಹಿಸಲಾಗುವುದು.

ಇದು ವಿವಿಧ ರೀತಿಯ ಡಿಸ್ಕೌಂಟ್ಗಳನ್ನು ಒಳಗೊಂಡಿರುತ್ತದೆ. ಈ ಯೋಜನೆಯು ಪುಣೆಯಲ್ಲಿ ಬಹಳ ಜನಪ್ರಿಯವಾಗಿದೆ. ಈ ಅಭಿಯಾನದಡಿಯಲ್ಲಿ ಬಹಳಷ್ಟು ಜನರಿಗೆ ಕೂಪನ್ಗಳನ್ನು ನೀಡಲಾಗಿದೆ. ಪುಣೆ ಮಿರರ್ ಪ್ರಕಾರ ಈಗಾಗಲೇ ಸುಮಾರು 10,000 ಕೂಪನ್ಗಳು ಹಾಗೂ ಡಿಸ್ಕೌಂಟ್ ವೋಚರ್ಗಳನ್ನು ನೀಡಲಾಗಿದೆ. ಪೊಲೀಸರ ಪ್ರಕಾರ, ಕೂಪನ್ಗಳನ್ನು ಪಡೆದ ವಾಹನ ಚಾಲಕರು ಅವುಗಳನ್ನು ಆಹಾರ ಮಳಿಗೆಗಳಲ್ಲಿ ಹಾಗೂ ಫುಡ್ ಆರ್ಡರ್ ಮಾಡುವಾಗ ಬಳಸಿದ್ದಾರೆ.

ಪುಣೆ ಟ್ರಾಫಿಕ್ ಪೊಲೀಸರು ಈ ಯೋಜನೆಯನ್ನು ಮುಂದುವರಿಸಲು ನಿರ್ಧರಿಸಿದ್ದಾರೆ. ಪೊಲೀಸರು ಕೂಪನ್ಗಳ ಬಳಕೆಯನ್ನು ಸಹ ಟ್ರ್ಯಾಕ್ ಮಾಡುತ್ತಿದ್ದು, ಪಾಲುದಾರರು ನೀಡುವ ಮಾಹಿತಿಯ ಆಧಾರದ ಮೇಲೆ, ಮುಂಬರುವ ದಿನಗಳಲ್ಲಿ ಬದಲಾವಣೆಗಳನ್ನು ಮಾಡಲಿದ್ದಾರೆ. ಪೊಲೀಸರ ಪ್ರಕಾರ ಈ ಕೂಪನ್ಗಳನ್ನು ಹೆಚ್ಚಾಗಿ ಚಿಟಾಲೆ ಬಂಧು, ತಿರಂಗಾ ಬಿರಿಯಾನಿ ಹಾಗೂ ವೀನಸ್ ಟ್ರೇಡರ್ಸ್ನಲ್ಲಿ ಬಳಸಲಾಗಿದೆ.

ಈ ಯೋಜನೆಗಾಗಿ ಪಾಲುದಾರರೇ ಸಂಪೂರ್ಣ ಧನಸಹಾಯ ಮಾಡಿದ್ದು, ಗ್ರಾಹಕರಿಗೆ ನೀಡುವ ಎಲ್ಲಾ ರಿಯಾಯಿತಿ ವೆಚ್ಚಗಳನ್ನುಭರಿಸಲಿದ್ದಾರೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ರಸ್ತೆ ಬಳಕೆದಾರರನ್ನು ಕಾನೂನಿನ ಪ್ರಕಾರ ನಡೆದುಕೊಳ್ಳುವಂತೆ ಪ್ರೇರೇಪಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ. ದೆಹಲಿಯಂತಹ ಇತರ ರಾಜ್ಯಗಳ ಪೊಲೀಸರು ಈ ಹಿಂದೆ ಹೆಲ್ಮೆಟ್ ಇಲ್ಲದೆ ವಾಹನ ಚಾಲಕರಿಗೆ ಉಚಿತ ಹೆಲ್ಮೆಟ್ ನೀಡುತ್ತಿದ್ದರು. ಆದರೆ, ಫುಡ್ ಕೂಪನ್ಗಳನ್ನು ಭಾರತದಲ್ಲಿ ಮೊದಲ ಬಾರಿಗೆ ನೀಡಲಾಗುತ್ತಿದ್ದು, ಭವಿಷ್ಯದಲ್ಲಿ ಹೆಚ್ಚು ಜನಪ್ರಿಯವಾಗುವ ಸಾಧ್ಯತೆಗಳಿವೆ.


Click it and Unblock the Notifications








