ಒಳ್ಳೆ ರಸ್ತೆಗಳೆ ಅಪಘಾತಕ್ಕೆ ಕಾರಣವಂತೆ ಈ ಸಚಿವರಿಗೆ..!
ಹೊಸ ಮೋಟಾರ್ ವಾಹನ ಕಾಯ್ದೆಯನ್ವಯ ಸಂಚಾರಿ ನಿಯಮ ಉಲ್ಲಂಘಿಸುವ ವಾಹನ ಚಾಲಕರಿಗೆ ಭಾರೀ ಪ್ರಮಾಣದ ದಂಡವನ್ನು ದೇಶಾದ್ಯಂತ ವಿಧಿಸಲಾಗುತ್ತಿದೆ. ಬೆಂಗಳೂರಿನಲ್ಲೂ ಕುಡಿದು ಬೈಕ್ ಚಾಲನೆ ಮಾಡುತ್ತಿದ್ದ ಸವಾರನಿಗೆ ರೂ.17,000 ದಂಡ ವಿಧಿಸಲಾಗಿತ್ತು.

ಈ ಭಾರೀ ಪ್ರಮಾಣದ ದಂಡದಿಂದಾಗಿ ಜನರು ಕಂಗಾಲಾಗಿದ್ದಾರೆ. ಆದ ಕಾರಣ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ನಿನ್ನೆಯಷ್ಟೇ ಸಾರಿಗೆ ಇಲಾಖೆಗೆ ಈ ಭಾರೀ ಪ್ರಮಾಣದ ದಂಡದ ಮೊತ್ತವನ್ನು ಕಡಿಮೆಗೊಳಿಸುವಂತೆ ಸೂಚನೆ ನೀಡಿದ್ದಾರೆ. ಈ ಮೂಲಕ ಗುಜರಾತ್ ಮಾದರಿಯಂತೆ ದಂಡದ ಮೊತ್ತವನ್ನು ಕರ್ನಾಟಕದಲ್ಲಿಯೂ ಕಡಿಮೆಗೊಳಿಸಲಾಗುವುದೆಂದು ಹೇಳಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಯಡಿಯೂರಪ್ಪನವರು, ಗುಜರಾತ್ ಸರ್ಕಾರವು ದಂಡದ ಮೊತ್ತವನ್ನು ಕಡಿಮೆಗೊಳಿಸಿರುವಂತೆ ನಮ್ಮ ರಾಜ್ಯದಲ್ಲಿಯೂ ಸಹ ದಂಡದ ಮೊತ್ತವನ್ನು ಕಡಿಮೆಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇನ್ನು ಕೆಲವೇ ದಿನಗಳಲ್ಲಿ ಹೊಸ ದಂಡ ಮೊತ್ತವನ್ನು ನಿಗದಿಗೊಳಿಸಲಾಗುವುದು.

ಆದೇಶದ ಪತ್ರವನ್ನು ಕೂಲಂಕುಷವಾಗಿ ಅಧ್ಯಯನ ನಡೆಸಿದ ನಂತರ ಯಾವುದೇ ರೀತಿಯ ಹೊರೆಯಾಗದಂತೆ ದಂಡದ ಮೊತ್ತವನ್ನು ಇಳಿಸಲಾಗುವುದು ಎಂದು ಹೇಳಿದರು. ಸಾರಿಗೆ ಖಾತೆಯನ್ನೂ ಹೊಂದಿರುವ ಉಪಮುಖ್ಯಮಂತ್ರಿ ಲಕ್ಷಣ ಸವದಿರವರು ಮಾತನಾಡಿ, ರಾಜ್ಯ ಸರ್ಕಾರವು ಗುಜರಾತ್ ರಾಜ್ಯದಲ್ಲಿ ವಿಧಿಸಲಾಗುತ್ತಿರುವ ದಂಡದ ಮೊತ್ತದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪಡೆದು ಇಲ್ಲಿಯೂ ಸಹ ಜಾರಿಗೊಳಿಸಲಾಗುವುದು ಎಂದು ಹೇಳಿದರು.

ಈ ಭಾರೀ ಪ್ರಮಾಣದ ದಂಡದಿಂದಾಗಿ ಜನಸಾಮಾನ್ಯರು ಪರದಾಡಬಾರದೆಂಬುದು ನಮ್ಮ ಉದ್ದೇಶವಾಗಿದೆ. ಭಾರೀ ಪ್ರಮಾಣದ ದಂಡವನ್ನು ವಿಧಿಸುತ್ತಿರುವ ಕೇಂದ್ರ ಸರ್ಕಾರದಿಂದ ನಾವು ಹೆಚ್ಚು ಅನುದಾನವನ್ನು ಪಡೆಯಬಹುದಾದರೂ, ನಮ್ಮ ಉದ್ದೇಶವು ಜನರಿಗೆ ಅನುಕೂಲ ಕಲ್ಪಿಸುವುದಾಗಿದೆ.

ಇನ್ನು ಮೂರು ನಾಲ್ಕು ದಿನಗಳ ಕಾಲ ಬೇರೆ ರಾಜ್ಯಗಳಲ್ಲಿನ ಪರಿಸ್ಥಿತಿಯನ್ನು ಗಮನಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಸವದಿರವರು ತಿಳಿಸಿದರು. ಸೆಪ್ಟೆಂಬರ್ 1ರಿಂದ ಜಾರಿಗೆ ಬಂದಿರುವ ಕಾಯ್ದೆಯನ್ವಯ ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗುತ್ತಿದೆ.

ಬೆಂಗಳೂರು ಸಂಚಾರ ಪೊಲೀಸರು ಸೆಪ್ಟೆಂಬರ್ 4ರಿಂದ ಸೆಪ್ಟೆಂಬರ್ 9ರವರೆಗಿನ ಅವಧಿಯಲ್ಲಿ ರೂ.72.49 ಲಕ್ಷ ದಂಡವನ್ನು ವಸೂಲಿ ಮಾಡಿದ್ದಾರೆ. ದಂಡದ ಮೊತ್ತವನ್ನು ಕಡಿಮೆಗೊಳಿಸುವಂತೆ ಜನ ಸಾಮಾನ್ಯರು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಹೊಸ ಮೋಟಾರ್ ವಾಹನ ಕಾಯ್ದೆಯನ್ವಯ ಸಂಚಾರಿ ನಿಯಮಗಳ ಉಲ್ಲಂಘನೆಗಾಗಿ ವಿಧಿಸಲಾಗುತ್ತಿರುವ ದಂಡದ ಮೊತ್ತವನ್ನು ಕಡಿಮೆಗೊಳಿಸಲು ಕೇಂದ್ರ ಸಚಿವ ನಿತಿನ್ ಗಡ್ಕರಿರವರು ನಿರಾಕರಿಸಿದ್ದಾರೆ. ದಂಡದ ಮೊತ್ತವನ್ನು ಕಡಿಮೆಗೊಳಿಸಿದರೆ ಈ ಕಾಯ್ದೆಯ ಉದ್ದೇಶವೇ ಬದಲಾಗಲಿದೆ ಎಂದು ಹೇಳಿದ್ದಾರೆ.
MOST READ: ಹೆಲ್ಮೆಟ್ ಹಾಕದ ಕಾರು ಚಾಲಕನಿಗೆ ಬಿತ್ತು ದಂಡ..!

ಭಾರೀ ಪ್ರಮಾಣದ ದಂಡವನ್ನು ವಿಧಿಸುವ ಮೊದಲು ರಸ್ತೆಗಳನ್ನು ಸರಿಪಡಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಮ್ಮ ರಾಜ್ಯದ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳರವರು ಕೆಟ್ಟ ರಸ್ತೆಗಳಿಂದ ಯಾವುದೇ ಅಪಘಾತಗಳಾಗುತ್ತಿಲ್ಲ, ಬದಲಿಗೆ ಒಳ್ಳೆಯ ರಸ್ತೆಗಳಿಂದಲೇ ಅಪಘಾತಗಳಾಗುತ್ತಿವೆ ಎಂದು ಹೇಳಿದ್ದಾರೆ.
MOST READ: ಚಪ್ಪಲಿ, ಲುಂಗಿ, ಬನಿಯನ್ ಧರಿಸಿದರೂ ಬೀಳಲಿದೆ ದಂಡ..!

ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಪ್ರತಿಕ್ರಿಯೆ ನೀಡಿರುವ ಗೋವಿಂದ ಕಾರಜೋಳರವರು, ಒಂದು ಅಂದಾಜಿನ ಪ್ರಕಾರ ನಮ್ಮ ರಾಜ್ಯದಲ್ಲಿ ಪ್ರತಿವರ್ಷ ಸುಮಾರು 10,000 ರಸ್ತೆ ಅಪಘಾತಗಳಾಗುತ್ತವೆ. ಆದರೆ ಈ ಅಪಘಾತಗಳು ಒಳ್ಳೆಯ ರಸ್ತೆಗಳಿಂದಾಗಿ ಆಗುತ್ತಿವೆಯೇ ಹೊರತು ಕೆಟ್ಟ ರಸ್ತೆಗಳಿಂದಲ್ಲ ಎಂದು ಹೇಳಿದ್ದಾರೆ.


Click it and Unblock the Notifications








