ಸಾವಿರಾರು ಉದ್ಯೋಗ ಕಡಿತಕ್ಕೆ ಮಾರುತಿ ಚಿಂತನೆ
ಕಳೆದ ವಾರ ಮಾನೆಸರ್ ಘಟಕದಲ್ಲಿ ಗಲಭೆ ನಿರತ ನೌಕರರು ಹಿರಿಯ ಎಚ್ಆರ್ ಮ್ಯಾನೆಜರನ್ನು ಸಜೀವವಾಗಿ ದಹಿಸಿದ್ದರು. ಈ ಗಲಭೆಯಲ್ಲಿ 90ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಗಲಭೆಗೆ ಕಾರಣರಾದ ನೂರಾರು ಸಿಬ್ಬಂದಿಗಳನ್ನು ಬಂಧಿಸಲಾಗಿತ್ತು.
"ಕಳೆದ ವಾರ ಮಾನೆಸರ್ ಗಲಭೆಯಲ್ಲಿ ಭಾಗಿಯಾದ ನೌಕರರನ್ನು ಉಳಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ" ಎಂದು ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಎಸ್ ವೈ ಸಿದ್ದೀಕಿ ಹೇಳಿದ್ದಾರೆ.
"ನಮ್ಮ ನೌಕರರ ಆರೋಗ್ಯ ಮತ್ತು ಸುರಕ್ಷತೆ ಖಾತ್ರಿ ಪಡಿಸಿಕೊಳ್ಳುವುದು ಅತ್ಯಂತ ಮುಖ್ಯ. ಇಂತಹ ಗಲಭೆಕೋರರು ಇದ್ದರೆ ನಮ್ಮ ಎಂಜಿನಿಯರುಗಳು ಮತ್ತು ಮೇಲ್ವಿಚಾರಕರು ಕೆಲಸ ಮಾಡುವುದು ಹೇಗೆ?" ಎಂದು ಅವರು ಹೇಳಿದ್ದಾರೆ.
"ಗಲಭೆಗೆ ಕಾರಣರಾದವರ ವಿಷಯದಲ್ಲಿ ಯಾವುದೇ ರೀತಿಯ ರಾಜಿ, ಸಂಧಾನ ಸೂತ್ರವಿಲ್ಲ" ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶಿಂಝೊ ನಕನಿಶಿ ಕೂಡ ಸ್ಪಷ್ಟಪಡಿಸಿದ್ದಾರೆ.
ಭಾರಿ ಪ್ರಮಾಣದ ಉದ್ಯೋಗ ಕಡಿತದೊಂದಿಗೆ ಕಂಪನಿಯು ಹೊಸದಾಗಿ ನೇಮಕಾತಿ ಪ್ರಕ್ರಿಯೆಯನ್ನೂ ಮಾಡುವ ನಿರೀಕ್ಷೆಯನ್ನು ಮೂಲಗಳು ವ್ಯಕ್ತಪಡಿಸಿವೆ. ಕಂಪನಿಯು ಆರಂಭಿಕವಾಗಿ ಸುಮಾರು 500ರಷ್ಟು ಹೊಸ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವ ನಿರೀಕ್ಷೆಯಿದೆ.
ಮಾನೆಸರ್ ಘಟಕದ ನೌಕರರಲ್ಲಿ ಸುಮಾರು 250 ಜನರಿಗೆ ಕ್ಲೀನ್ ಚಿಟ್ ನೀಡಲಾಗಿದೆಯಂತೆ. ಯಾಕೆಂದರೆ ಇವರು ಯಾವುದೇ ದುಷ್ಕೃತ್ಯಗಳಲ್ಲಿ ಭಾಗಿಯಾಗಿಲ್ಲ. ಇದರಲ್ಲಿ ಸುಮಾರು 160 ಸಿಬ್ಬಂದಿಗಳು ಉತ್ತಮ ನಡತೆ ಬಂಧ(ಗುಡ್ ಕಂಡಕ್ಟ್ ಬಾಂಡ್) ಅಗ್ರಿಮೆಂಟಿಗೆ ಸಹಿಹಾಕಿದ್ದಾರೆ. ಈ ಅಗ್ರಿಮೆಂಟನ್ನು ಕಳೆದ ವರ್ಷ ಕಂಪನಿಯು ಪರಿಚಯಿಸಿತ್ತು.


Click it and Unblock the Notifications









