ಮಾರುತಿ ಸುಜುಕಿ ಕಂಪನಿಯ ಭವಿಷ್ಯ ಬಲ್ಲವರಾರು?
ಕಳೆದ ವರ್ಷ ನೌಕರರು ನಡೆಸಿದ ಸರಣಿ ಪ್ರತಿಭಟನೆಯಿಂದ ಕಂಪನಿಗೆ ಕೋಟಿ ಕೋಟಿ ರುಪಾಯಿ ನಷ್ಟವಾಗಿತ್ತು. ಪ್ರಸಕ್ತ ವರ್ಷ ಹಣಕಾಸು ನಷ್ಟ ಮಾತ್ರವಲ್ಲದೇ ಮಾನವ ಸಂಪನ್ಮೂಲ ವಿಭಾಗದ ಹಿರಿಯ ಮ್ಯಾನೆಜರೇ ಬಲಿಯಾಗಿದ್ದರು.
ಮಾರುತಿ ಸುಜುಕಿ ಕಂಪನಿಯು ಮಾನೆಸರ್ ಘಟಕವನ್ನು ಸ್ಥಳಾಂತರಿಸಲಿದೆ ಎಂಬ ವರದಿಗಳಿದ್ದವು. ನರೇಂದ್ರ ಮೋದಿ ಗುಜರಾತಿಗೆ ಮಾನೆಸರ್ ಘಟಕವನ್ನು ಸೆಳೆಯಲಿದ್ದಾರೆ ಎಂಬ ವದಂತಿಗಳಿದ್ದವು. ಆದರೆ ಈ ಕುರಿತು ಮಾರುತಿ ಸುಜುಕಿ ಯಾವುದೇ ಸ್ಪಷ್ಟನೆ ನೀಡಿಲ್ಲ.
ಮಾನೆಸರ್ ಗಲಭೆಯಿಂದಾಗಿ ಸ್ವಿಫ್ಟ್ ಮುಂತಾದ ಕಾರುಗಳ ಉತ್ಪಾದನೆಗೆ ಹಿನ್ನಡೆಯಾಗಿದೆ. ಕಂಪನಿ ಸದ್ಯ ಗುರ್ ಗಾಂವ್ ಘಟಕವನ್ನು ಮಾತ್ರ ಅವಲಂಬಿಸಿಕೊಂಡಿದೆ. ಕಂಪನಿಯ ಷೇರುಗಳು ಕೂಡ ಕುಸಿದಿವೆ.
ಕಂಪನಿಯು ಇತ್ತೀಚೆಗೆ ಪರಿಚಯಿಸಿದ ಎರ್ಟಿಗಾ ಕಾರಿಗೆ ಗ್ರಾಹಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಸ್ವಿಫ್ಟ್ ಮತ್ತು ಡಿಜೈರ್ ಈಗಾಗಲೇ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿದೆ. ಆದರೆ ಇದೀಗ ಮಾನೆಸರ್ ಘಟಕಕ್ಕೆ ಬೀಗ ಮುದ್ರೆ ಹಾಕಿರುವುದರಿಂದ ಈ ಎಲ್ಲಾ ಕಾರುಗಳ ಉತ್ಪಾದನೆಗೆ ಹಿನ್ನಡೆಯಾಗಲಿದೆ.
ಮಾರುತಿ ಸುಜುಕಿಗೆ ಹತ್ತಿರದ ಪ್ರತಿಸ್ಪರ್ಧಿಯೆಂದರೆ ಹ್ಯುಂಡೈ ಮೋಟರ್ಸ್. ಆದರೆ ಇವೆರಡು ಕಂಪನಿಗಳ ಅಂತರ ದೊಡ್ಡದಾಗಿದೆ. ಹೀಗಾಗಿ ಮಾರುತಿಗೆ ಪೈಪೋಟಿ ನೀಡುವುದು ಸುಲಭವಲ್ಲ. ಕಂಪನಿಯು ಶೀಘ್ರದಲ್ಲಿ ಮಾರುತಿ 800 ಬದಲಿ ಆವೃತ್ತಿ ತರುವುದಾಗಿ ಹೇಳಿತ್ತು. ಮಾನೆಸರ್ ಗಲಭೆಯಿಂದ ಇದು ಮುಂದಕ್ಕೆ ಹೋಗಿದೆ.
ಮಾನೆಸರ್ ಘಟನೆಯಿಂದ ಮಾರುತಿ ಸುಜುಕಿಗೆ ಕೊಂಚ ಹಿನ್ನಡೆಯಾಗಬಹುದು. ಆದರೆ ಸದ್ಯ ದೇಶದ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ಅದರ ಅಗ್ರ ಸ್ಥಾನ ಕಸಿದುಕೊಳ್ಳಲು ಯಾವ ಕಂಪನಿಗೆ ಸಾಧ್ಯವಿಲ್ಲವೆಂದೆನಿಸುತ್ತದೆ.


Click it and Unblock the Notifications









