ವಾಹನ ಹಿಂಪಡೆತಕ್ಕೆ ದೇಶದಲ್ಲಿ ನೂತನ ಕಾನೂನು
ಜಾಗತಿಕವಾಗಿ ರಿಕಾಲ್ ಎನ್ನುವುದು ಜನಪ್ರಿಯ ಪದ. ಯಾವುದಾದರೂ ಒಂದು ವಾಹನದಲ್ಲಿ ತೊಂದರೆ ಕಂಡು ಬಂದರೆ, ಅದೇ ಸಮಯದಲ್ಲಿ ಉತ್ಪಾದಿಸಿದ ಹೆಚ್ಚಿನ ವಾಹನಗಳನ್ನು ವಿದೇಶಿ ಕಂಪನಿಗಳು ಹಿಂಪಡೆಯುತ್ತವೆ. ಅಲ್ಲಿನ ಹೆದ್ದಾರಿ ಮತ್ತು ರಸ್ತೆ ಸುರಕ್ಷತೆ ಪ್ರಾಧಿಕಾರವು ಈ ವಿಷಯದಲ್ಲಿ ಹೆಚ್ಚು ಕಟ್ಟುನಿಟ್ಟಾಗಿದೆ.
ಆಕ್ಸಿಲರೇಟರ್ ಪೆಡಲ್ ಸಮಸ್ಯೆ ಸರಿಪಡಿಸಲು ಟೊಯೊಟಾ ಕಂಪನಿಯು 14 ಲಕ್ಷ ವಾಹನಗಳನ್ನು ಹಿಂಪಡೆದಿತ್ತು. ಇಂಧನ ಲೀಕೆಜ್ ಸಮಸ್ಯೆ ಸರಿಪಡಿಸಲು 25 ಸಾವಿರಕ್ಕೂ ಹೆಚ್ಚು ವಾಹನಗಳನ್ನು ಫೋರ್ಡ್ ಹಿಂಪಡೆದಿತ್ತು. ಸ್ಪೀಡ್ ಕಂಟ್ರೋಲ್ ಸಮಸ್ಯೆ ಸರಿಪಡಿಸಲು ಮರ್ಸಿಡಿಸ್ ಬೆಂಝ್ ಒಂದು ಲಕ್ಷಕ್ಕಿಂತಲೂ ಹೆಚ್ಚು ವಾಹನ ಹಿಂಪಡೆದಿತ್ತು. ಹೋಂಡಾ ಕೂಡ ಲಕ್ಷಗಟ್ಟಲೆ ವಾಹನಗಳನ್ನು ವಾಪಸ್ ಪಡೆದಿತ್ತು.
ಆದರೆ ದೇಶದಲ್ಲಿ ರಿಕಾಲ್ ಎಂಬ ಪದವು ವಾಹನ ಕಂಪನಿಗಳಿಗೆ ವರ್ಜ್ಯವಾಗಿತ್ತು. ದೇಶದಲ್ಲಿ ವಾಹನಗಳು ಬೆಂಕಿಗೀಡಾಗುವ ಪ್ರಕರಣಗಳು ಕಂಡು ಬಂದರೂ ರಿಕಾಲ್ ಮಾಡುತ್ತಿರಲಿಲ್ಲ. ನೂತನ ಹಿಂಪಡೆತ ನೀತಿಯು ವಾಹನ ಉತ್ಪಾದನೆ ತರುವಾಯದ ಏಳು ವರ್ಷಕ್ಕೆ ಅನ್ವಯವಾಗುತ್ತದೆ. ಈ ಕುರಿತು ವಾಹನ ಕಂಪನಿಗಳು ತಮ್ಮ ವೆಬ್ ತಾಣ ಮತ್ತು ಮಾಧ್ಯಮಗಳಲ್ಲಿ ಪ್ರಕಟಣೆ ನೀಡಬೇಕು ಎಂದು ಸ್ಯಾಮ್ ಹೇಳಿದೆ.
ಗ್ರಾಹಕರಿಗೆ ವಾಹನಗಳನ್ನು ನೀಡಿದ ನಂತರ ದೋಷ ಕಂಡುಬಂದರೆ ತಕ್ಷಣ ಕಂಪನಿಯು ವಾಹನಗಳನ್ನು ವಾಪಸ್ ಪಡೆದು ಗ್ರಾಹಕರಿಗೆ ಸಮಸ್ಯೆ ಸರಿಪಡಿಸಿಕೊಡಬೇಕು. ದ್ವಿಚಕ್ರವಾಹನ, ಕಾರು, ಜೀಪು, ವಾಣಿಜ್ಯವಾಹನಗಳು ಮತ್ತು ವಾಹನ ರಫ್ತುದಾರರು ನೂತನ ನೀತಿಯನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸ್ಯಾಮ್ ಹೇಳಿದೆ.
"ನೂತನ ನೀತಿಯು ವಾಹನದ ಗುಣಮಟ್ಟ ಮತ್ತು ಬದ್ಧತೆಯನ್ನು ಹೆಚ್ಚಿಸಲು ನೆರವಾಗಲಿದೆ. ದೇಶದ ಎಲ್ಲಾ ವಾಹನ ಕಂಪನಿಗಳು ಸ್ವಯಂಪ್ರೇರಿತವಾಗಿ ಇಂತಹ ಹಿಂಪಡೆತ ಮಾಡಬೇಕು. ಕಂಪನಿಗಳು ರಿಕಾಲ್ ಮಾಡದೆ ಇದ್ದರೆ ಸರಕಾರವು ಮಧ್ಯಪ್ರವೇಶ ಮಾಡಿ ರಿಕಾಲ್ ಮಾಡುವಂತೆ ಆದೇಶಿಸಬಹುದಾಗಿದೆ" ಎಂದು ಸ್ಯಾಮ್ ಅಧ್ಯಕ್ಷ ಎಸ್. ಶಾಂಡಿಲ್ಯ ಹೇಳಿದ್ದಾರೆ.
ಇಲ್ಲಿವರೆಗೆ ದೇಶದಲ್ಲಿ ಸೂಕ್ತವಾದ ರಿಕಾಲ್ ನೀತಿ ಇರಲಿಲ್ಲ. ಕೆಲವು ಕಾರು ಕಂಪನಿಗಳು ಸ್ವಯಂಪ್ರೇರಿತವಾಗಿ ತೊಂದರೆಯಿರುವ ವಾಹನಗಳನ್ನು ಅಪರೂಪಕ್ಕೆ ಎಂಬಂತೆ ಹಿಂಪಡೆದಿವೆ. ಬ್ರಾಂಡ್ ಮೌಲ್ಯ ಮತ್ತು ಮಾರಾಟ ಕಡಿಮೆಯಾದೀತು ಎಂದು ವಾಹನಗಳಲ್ಲಿ ತಾಂತ್ರಿಕ ತೊಂದರೆಯಿರುವುದನ್ನು ಪ್ರಕಟಿಸಲು ಹಿಂಜರಿಯುತ್ತಿವೆ. ಆದರೆ ಇನ್ಮುಂದೆ ದೇಶದಲ್ಲಿ ವಾಹನ ಕಂಪನಿಗಳು ದೋಷಪೂರಿತ ವಾಹನಗಳನ್ನು ಹಿಂಪಡೆಯುವುದು ಕಡ್ಡಾಯ.


Click it and Unblock the Notifications









