ವಾಹನಗಳಿಗೆ ಪೂಜೆ ಸಲ್ಲಿಸುವುದರಿಂದ ಅಪಘಾತ ತಪ್ಪಿಸಬಹುದೇ?
ಕೆಡುಕಿನ ಮೇಲೆ ಒಳಿತಿನ ಜಯದ ಸಂಕೇತವಾಗಿರುವ ದಸರಾ ಹಬ್ಬವು ಕೊನೆಯ ಹಂತ ತಲುಪಿರುವಂತೆಯೇ ನಾಡಿನೆಲ್ಲೆಡೆ ಸಂಭ್ರಮದ ಆಯುಧ ಪೂಜೆ (13/10/2013)ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಹೀಗೆ ವಾಹನಗಳಿಗೆ ಪೂಜೆ ಸಲ್ಲಿಸುವುದರಿಂದ ಅಪಘಾತಗಳನ್ನು ತಪ್ಪಿಸಬಹುದು ಎಂಬುದು ನಂಬಿಕೆಯಾಗಿದೆ. ಇದರಂತೆ ತಮ್ಮ ತಮ್ಮ ಊರುಗಳ ದೇವಾಲಯಗಳಿಗೆ ತೆರಳಿ ಮಾಲಿಕರು ವಾಹನಗಳಿಗೆ ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ.
ಆಯುಧ ಪೂಜೆಯಂದು ಮಾಲಿಕರು ತಮ್ಮ ವಾಹನಗಳನ್ನು ತೊಳೆದು, ಹೂವುಗಳಿಂದ ಶೃಂಗರಿಸಿ, ಕುಂಕುಮ, ಅರಶಿನವನ್ನು ಹಚ್ಚಿ, ಅದಕ್ಕೆ ನಿಂಬೆ ಹಣ್ಣು ಇಲ್ಲವೆ ಕುಂಬಳ ಕಾಯಿ ಒಡೆದು ಪೂಜೆ ಸಲ್ಲಿಸುತ್ತಾರೆ. ಅಂತೆಯೇ ಮಾವಿನ ಸೊಪ್ಪು, ಬಾಳೆಕಂದು, ಕಬ್ಬು ಹಾಗೂ ಚಂಡು ಹೂವುಗಳಿಂದ ಆಲಂಕರಿಸಿದ್ದ ವಾಹನಗಳು ಮದುವಣಗಿತ್ತಿಯಂತೆ ರಸ್ತೆಯೆಲ್ಲೆಡೆ ಓಡಾಡುತ್ತಿರುವ ದೃಶ್ಯ ಸರ್ವೇ ಸಾಮಾನ್ಯವಾಗಿದೆ.
ದೈವ ವಿಶ್ವಾಸ ಕಡಿಮೆಯಾಗುತ್ತಿರುವ ಆಧುನಿಕ ಜಗತ್ತಿನಲ್ಲೂ ಇಂಥ ವಿಶಿಷ್ಟ ಸಂಪ್ರದಾಯವನ್ನು ಆಚರಿಸಿಕೊಂಡು ಬರುತ್ತಿರುವುದು ಕರ್ನಾಟಕದ ಶ್ರೀಮಂತ ಸಂಸ್ಕೃತಿಯನ್ನು ಸಾರುತ್ತಾರೆ. ಈ ಎಲ್ಲ ವಿಚಾರಗಳ ನಡುವೆ ವಾಹನಗಳಿಗೆ ಪೂಜೆ ಸಲ್ಲಿಸುವುದರಿಂದ ಅಪಘಾತ ತಪ್ಪಿಸಬಹುದೇ? ಎಂಬ ಪ್ರಶ್ನೆಯೊಂದಿಗೆ ಚರ್ಚೆಗೆ ವೇದಿಕೆ ಸಿದ್ಧಗೊಳಿಸುತ್ತಿದ್ದೇವೆ. ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ಮೂಲಕ ವ್ಯಕ್ತಪಡಿಸಿರಿ...

ವಾಹನ ಪೂಜೆಯಂದು ಚಾಲಕರು ತಮ್ಮ ವಾಹನಗಳಿಗೆ ಬಗೆ ಬಗೆಯ ಅಲಂಕಾರ ಮಾಡುತ್ತಾರೆ. ತಮ್ಮ ಸ್ನೇಹಿತನಿಗಿಂತ ಚೆನ್ನಾಗಿ ವಾಹನ ಶೃಂಗಾರಗೊಳಿಸಬೇಕೆಂಬ ಅಭಿಲಾಷೆಯೊಂದಿಗೆ ಮಾಲಿಕರು ಕೆಲವೊಮ್ಮೆ ತಮ್ಮ ವಾಹನದ ಗಾಜುಗಳನ್ನು ಹೂವು, ಸೊಪ್ಪುಗಳಿಂದ ಮುಚ್ಚಿಬಿಡುತ್ತಾರೆ. ಈ ಮೂಲಕ ರಸ್ತೆಯೇ ಕಾಣದಂತೆ ವಾಹನಗಳನ್ನು ಆಲಂಕರಿಸುವ ಮೂಲಕ ಅಪಾಯವನ್ನು ಆಹ್ವಾನಿಸುತ್ತಾರೆ.

ನಿಮ್ಮ ಮಾಹಿತಿಗಾಗಿ ಆಯುಧ ಪೂಜೆಯಂದು ಮನೆಯಲ್ಲಿ ತರಕಾರಿ ಹಚ್ಚುವ ಚಾಕುವಿನಿಂದ ಹಿಡಿದು ಯುದ್ಧ ವಿಮಾನಗಳ ವರೆಗೆ ಪೂಜೆಯನ್ನು ಸಲ್ಲಿಸಲಾಗುತ್ತದೆ. ಇದು ಹಿಂದೂ ಸಂಸ್ಕೃತಿಯಲ್ಲಿ ಆಯುಧ ಪೂಜೆಯ ಮಹತ್ವವನ್ನು ಸಾರುತ್ತದೆ.

ಇನ್ನು ನೂತನ ವಾಹನ ಖರೀದಿಗಾರರು ಹೆಚ್ಚಾಗಿ ಆಯುಧ ಪೂಜೆಯಂದೇ ತಮ್ಮ ಕಾರು, ಬೈಕ್ಗಳಿಗೆ ಪೂಜೆ ಸಲ್ಲಿಸಿ ತಮ್ಮ ಪಯಣ ಆರಂಭಿಸುತ್ತಾರೆ. ಹೀಗೆ ಮಾಡುವುದರಿಂದ ವಾಹನಗಳಿಗೆ ದೀರ್ಘ ಬಾಳ್ವಿಕೆ ಪ್ರಾಪ್ತಿಯಾಗುವುದರೊಂದಿಗೆ ಅಪಘಾತವನ್ನು ತಪ್ಪಿಸಬಹುದಾಗಿದೆ ಎಂಬುದು ನಂಬಿಕೆಯಾಗಿದೆ.

ಇನ್ನು ಇಂತಹ ಆಚಾರ ವಿಚಾರಗಳನ್ನು ದೇವರಲ್ಲಿ ನಂಬಿಕೆಯಿಲ್ಲದ ನಾಸ್ತಿಕರು ಕಡುವಾಗಿ ವಿರೋಧಿಸುತ್ತಾರೆ. ಡ್ರೈವಿಂಗ್ ಮೇಲಿನ ಏಕಾಗ್ರತೆಗೆ ಭಂಗವುಂಟಾದ್ದಲ್ಲಿ ಅಪಘಾತ ಕಟ್ಟಿಟ್ಟ ಬುತ್ತಿ ಎಂಬುದು ಅಂತವರ ವಾದ. ಇಲ್ಲಿ ವಿಧಿ ವಿಧಾನಗಳಿಗೆ ಪ್ರಾಮುಖ್ಯತೆಯಿಲ್ಲ. ನೀವು ವಾಹನ ಚಾಲನೆ ಕರಗತ ಮಾಡಿಕೊಂಡಿದ್ದಲ್ಲಿ ಗುರಿ ಮುಟ್ಟುವಲ್ಲಿ ಯಶಸ್ವಿಯಾಗುವಿರಿ.

ಒಟ್ಟಾರೆಯಾಗಿ ಹೇಳುವುದಾದರೆ ನಂಬಿಕೆ, ಆಚಾರ ವಿಚಾರ ಏನೇ ಆಗಿರಲಿ, ವಾಹನದ ದೃಷ್ಟಿಕೋನದಿಂದ ಆಯುಧ ಪೂಜೆ ಹೊಚ್ಚ ಹೊಸತಾಗಿರಿಸುವ ಸಂದರ್ಭವಾಗಿದೆ. ಹಾಗಾಗಿ ನಂಬಿಕೆಯನ್ನು ಅದರ ಪಾಡಿಗೆ ಬಿಟ್ಟುಬಿಡುವುದು ಒಳಿತು.


Click it and Unblock the Notifications








