ಡಿಸೆಂಬರ್ ಅಂತ್ಯದ ವರೆಗೆ ಅಬಕಾರಿ ಸುಂಕ ಏರಿಕೆಯಿಲ್ಲ
ಗಮನಾರ್ಹ ಬೆಳವಣಿಗೆಯೊಂದರಲ್ಲಿ ವಾಹನಗಳ ಮೇಲಿನ ಅಬಕಾರಿ ಸುಂಕವನ್ನು 2014 ಡಿಸೆಂಬರ್ 31ರ ವರೆಗೆ ಏರಿಕೆ ಮಾಡದಿರಲು ನೂತನ ಕೇಂದ್ರ ಸರಕಾರ ನಿರ್ಧರಿಸಿದೆ. ಇದರಿಂದಾಗಿ ಭಾರತೀಯ ವಾಹನ ತಯಾರಕ ಸಂಸ್ಥೆಗಳ ಜೊತೆಗೆ ನೂತನ ಖರೀದಿಗಾರರು ನಿಟ್ಟುಸಿರು ಬಿಡುವಂತಾಗಿದೆ.
ಕಳೆದ ಕೇಂದ್ರ ಸರಕಾರ ಮಂಡಿಸಿದ್ದ ತಾತ್ಕಾಲಿಕ ಬಜೆಟ್ನಲ್ಲಿ ವಾಹನಗಳ ಮೇಲಿನ ಅಬಕಾರಿ ಸುಂಕವನ್ನು ಇಳಿಕೆಗೊಳಿಸಲಾಗಿತ್ತು. ಇದು ಜೂನ್ 30ರ ವರೆಗೆ ಜಾರಿಯಲ್ಲಿರಲಿದೆ. ಇದರಿಂದಾಗಿ ನೂತನ ಸರಕಾರ ದರ ಏರಿಕೆ ನೀತಿ ಅನುಸರಿಸಿತೇ ಎಂಬುದು ತೀವ್ರ ಕುತೂಹಲ ಕೆರಳಿಸಿತ್ತು.

ಆದರೆ ಈ ಸಂಬಂಧ ಹೇಳಿಕೆ ಹೊರಡಿಸಿರುವ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರದ ವಿತ್ತ ಸಚಿವ ಅರುಣ್ ಜೇಟ್ಲಿ ವಾಹನಗಳ ಮೇಲಿನ ಅಬಕಾರಿ ಸುಂಕವು 2014 ಡಿಸೆಂಬರ್ 31ರ ವರೆಗೆ ಶೇಕಡಾ 3ರಿಂದ 6ರಂತೆಯೇ ಮುಂದುವರಿಯಲಿದೆ ಎಂದಿದ್ದಾರೆ.
ಕೇಂದ್ರ ಸರಕಾರದಿಂದ ವ್ಯಕ್ತವಾಗಿರುವ ಪೂರಕ ನಿಲುವನ್ನು ಸ್ವಾಗತಿಸಿರುವ ಭಾರತೀಯ ವಾಹನ ತಯಾರಕ ಸಂಸ್ಥೆಗಳ ಒಕ್ಕೂಟದ (ಸಿಯಾಮ್) ಅಧ್ಯಕ್ಷ ವಿಕ್ರಮ್ ಕಿರ್ಲೊಸ್ಕರ್, "ಅಬಕಾರಿ ಸುಂಕ ಇಳಿಕೆಯ ಕಾಲಾವಧಿಯನ್ನು ಮುಂದುವರಿಸಿರುವುದು ಗ್ರಾಹಕರ ಮನೋಭಾವದ ಮೇಲೆ ಧನಾತ್ಮಕ ಪರಿಣಾಮ ಬೀರಲಿದ್ದು, ಈ ಮೂಲಕ ಕಳೆದ ಎರಡು ವರ್ಷಗಳಿಂದ ಕುಸಿದು ಹೋಗಿರುವ ವಾಹನೋದ್ಯಮ ಕೈಗಾರಿಕಾ ಕ್ಷೇತ್ರದಲ್ಲಿ ನಿರಂತರ ಚೇತರಿಕೆ ಕಾಣಬಹುದಾಗಿದೆ" ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಮಾತು ಮುಂದುವರಿಸಿದ ಅವರು, "ದೀರ್ಘಾವಧಿಯಲ್ಲಿ ವಾಹನ ಕ್ಷೇತ್ರದಲ್ಲಿ ಬೆಳವಣಿಗೆ ಮರು ತರುವಲ್ಲಿ ಇದರಿಂದ ಸಾಧ್ಯವಾಗಲಿದ್ದು, ಉದ್ಯಮದಲ್ಲಿ ಹೂಡಿಕೆ ಹೆಚ್ಚುವ ಮೂಲಕ ಹೆಚ್ಚಿನ ಉದ್ಯೋಗ ಉತ್ತೇಜಿಸಬಹುದಾಗಿದೆ. ಇಂತಹದೊಂದು ಕ್ರಮ ಕೈಗೊಂಡಿರುವ ಕೇಂದ್ರ ಸರಕಾರಕ್ಕೆ ಧನ್ಯವಾದ ಸಲ್ಲಿಸುತ್ತಿದ್ದೇವೆ" ಎಂದಿದ್ದಾರೆ.
ಅಬಕಾರಿ ಸುಂಕ ಕಡಿತಗೊಳಿಸಿರುವ ನಿಜವಾದ ಶ್ರೇಯ ಕಳೆದ ಯುಪಿಎ ಸರಕಾರದ ವಿತ್ತ ಸಚಿವರಾಗಿದ್ದ ಪಿ ಚಿದಂಬರಂ ಅವರಿಗೆ ಸಲ್ಲುತ್ತದೆ. ಅಂದಿನ ತಾತ್ಕಾಲಿಕ ಬಜೆಟ್ನಲ್ಲಿ ಎಸ್ಯುವಿ ಶೇಕಡಾ 24, ಮಧ್ಯ ಗಾತ್ರದ ವಾಹನಗಳಿಗೆ ಶೇಕಡಾ 20ರಿಂದ 24 ಹಾಗೆಯೇ ದ್ವಿಚಕ್ರ ವಾಹನಗಳಿಗೆ ಶೇಕಡಾ 8ರಷ್ಟು ಅಬಕಾರಿ ಸುಂಕ ವಿಧಿಸಲಾಗಿತ್ತು.


Click it and Unblock the Notifications








