ಉತ್ಪಾದನಾ ಘಟಕದಿಂದಲೇ 2 ಹೊಸ ರೆನಾಲ್ಟ್ ಡಸ್ಟರ್ ಕಾರು ಕಳ್ಳತನ ಮಾಡಿದ್ದ ಖದೀಮರು ಅಂದರ್
ಸುಮಾರು 8 ತಿಂಗಳು ಹಿಂದಿನ ಕಾರು ಕಳ್ಳತನ ಪ್ರಕರಣ ಇದು. ಕಾರು ಉತ್ಪಾದನಾ ಘಟಕದಿಂದಲೇ 2 ಹೊಸ ಡಸ್ಟರ್ ಕಾರುಗಳನ್ನು ಎಗರಿಸಿದ್ದ ಖದೀಮರು ಇದೀಗ ಸಿಕ್ಕಿಬಿದ್ದಿದ್ದಾರೆ. ಕಾರು ಉತ್ಪಾದನಾ ಘಟಕದಿಂದಲೇ ಹೊಸ ಕಾರು ಕಳ್ಳತನ ಮಾಡಿದ ಆ ಖದೀಮರು ಯಾರು ಅಂತಾ ಗೊತ್ತಾದಾಗ ರೆನಾಲ್ಟ್ ಸಂಸ್ಥೆಯೇ ಬೆಚ್ಚಿಬಿದ್ದಿದೆ.

ಹೌದು, ಚೆನ್ನೈ ಬಳಿಯಿರುವ ರೆನಾಲ್ಟ್ ಇಂಡಿಯಾ ಸಂಸ್ಥೆಯ ಕಾರು ಉತ್ಪಾದನಾ ಘಟಕದಲ್ಲಿ ಕಳೆದ 8 ತಿಂಗಳು ಹಿಂದೆ ಕಳ್ಳತನವಾಗಿದ್ದ ಎರಡು ಡಸ್ಟರ್ ಕಾರುಗಳ ಕಳ್ಳತನ ಪ್ರಕರಣವು ಕೊನೆಗೂ ಸುಖಾಂತ್ಯ ಕಂಡಿದೆ. ಕದ್ದ ಕಾರುಗಳನ್ನು ಅಗ್ಗದ ಬೆಲೆಗೆ ಮಾರಾಟ ಮಾಡಿದ್ದ ಇಬ್ಬರು ಖದೀಮರು ಸದ್ಯ ಜೈಲು ಕಂಬಿ ಎಣಿಸುತ್ತಿದ್ದು, ಕಳ್ಳತನ ಮಾಡಿದವರನ್ನು ಕಂಡು ರೆನಾಲ್ಟ್ ಸಂಸ್ಥೆಗೆ ಶಾಕ್ ಆಗಿದೆ.

ಸಿಬ್ಬಂದಿಯಿಂದಲೇ ಕೃತ್ಯ
ಅಸಲಿಗೆ ರೆನಾಲ್ಟ್ ಕಾರು ಉತ್ಪಾದನಾ ಘಟಕದಲ್ಲಿ ಡಸ್ಟರ್ ಕಾರುಗಳನ್ನು ಕಳ್ಳತನ ಮಾಡಿದ್ದು ಬೇರೆ ಯಾರು ಅಲ್ಲಾ. ಸುಮಾರು 7 ವರ್ಷಗಳಿಂದ ಇದೇ ಸಂಸ್ಥೆಯ ಕಾರು ಉತ್ಪಾದನಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಸಿಬ್ಬಂದಿಯು ಕಾರು ಕಳ್ಳತನ ಮಾಡಿದ್ದು ಕೊನೆಗೂ ಪತ್ತೆಯಾಗಿದೆ.

28 ವರ್ಷದ ಮಾರಿಮುತ್ತು ಮತ್ತು 27 ವರ್ಷದ ಅರುಣ್ ಕುಮಾರ್ ಕಾರು ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದು, ಸುಮಾರು 8 ತಿಂಗಳು ಕಾಲ ಪ್ರಕರಣಕ್ಕೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ನಡೆದುಕೊಂಡಿದ್ದರು. ಆದ್ರೆ ತನಿಖೆ ವೇಳೆ ಸಿಕ್ಕಿಬಿದ್ದ ಈ ಖರೀದಿಮರು ಕಳ್ಳತನದ ಪ್ಲ್ಯಾನ್ ಅನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಫೇಕ್ ಐಡಿ ಸೃಷ್ಠಿಸಿದ್ದರು..!
ಕಾರು ಉತ್ಪಾದನಾ ಘಟಕದಲ್ಲಿ ಅಪರಿಚಿತರು ಪ್ರವೇಶ ಪಡೆಯುವುದು ಅಷ್ಟು ಸುಲಭವಲ್ಲ. ಅಂತದ್ರಲ್ಲಿ ಕಾರು ಕಾರು ಕಳ್ಳತನ ಮಾಡುವುದು ಅಂದ್ರೆ ಅಷ್ಟು ಸುಲಭ ಮಾತಲ್ಲ. ಅದಕ್ಕಾಗಿಯೇ ಕಾರು ಉತ್ಪಾದನಾ ವಿಭಾಗದಲ್ಲಿ ನಿಲುಗಡೆಯಾಗಿದ್ದ ಕಾರು ಹೊರತರಲು ಖದೀಮರು ಫೇಕ್ ಐಡಿ ಸೃಷ್ಠಿಸಿದ್ದರು.

ಪ್ರೋಟೋಕಾಲ್ ನಿರ್ಬಂಧನೆಗಳನ್ನು ಮುರಿಯಲು ತಂತ್ರಜ್ಞಾನ ಮೊರೆಹೊಗಿದ್ದ ಖದೀಮರು ಅದೇ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಲವು ಹಿರಿಯ ಅಧಿಕಾರಿಗಳಿಂದ ಅಲ್ಲಿನ ಭದ್ರತಾ ಕ್ರಮಗಳ ಸಂಪೂರ್ಣ ಮಾಹಿತಿಯನ್ನು ಕಲೆಹಾಕಿ ಕಾರು ಕಳ್ಳತನದ ಸ್ಕೇಚ್ ರೆಡಿ ಮಾಡಿದ್ದರು.
MOST READ: ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಮೀನುಗಾರನಿಗೆ ಮಹೀಂದ್ರಾ ಕಡೆಯಿಂದ ಭರ್ಜರಿ ಉಡುಗೊರೆ

ರೋಡ್ ಟೆಸ್ಟಿಂಗ್ ಅಂದ್ರು ಕಾರು ಕದ್ರು..!
ಕಾರು ಉತ್ಪಾದನಾ ಘಟಕದ ಮುಖ್ಯ ದ್ವಾರದಲ್ಲಿ ಭದ್ರತಾ ಸಿಬ್ಬಂದಿಗೆ ಚೆಳ್ಳೆಹಣ್ಣು ತಿನ್ನಿಸಿದ್ದ ಈ ಖದೀಮರು ರಾತ್ರಿ 2 ಗಂಟೆಯ ಹೊತ್ತಿಗೆ ವೇಷ ಬದಲಿಸಿ ಎರಡು ಹೊಚ್ಚ ಹೊಸ ಡಸ್ಟರ್ ಕಾರುಗಳನ್ನು ಹೊರತಂದಿದ್ದರು. ಅಲ್ಲಿಂದ ಸಿದಾ ಗೌಪ್ಯ ಸ್ಥಳದಲ್ಲಿ ಕಾರು ನಿಲ್ಲಿಸಿದ್ದ ಮಾರಿಮುತ್ತು ಮತ್ತು ಅರುಣ್ ಕುಮಾರ್ ಮರುದಿನ ಎಂದಿನಂತೆ ಕೆಲಸಕ್ಕೆ ಹಾಜರಾಗಿದ್ದರು.

ತದನಂತರ ಕಾರು ಕಳ್ಳತನವಾಗಿರುವ ಬಗ್ಗೆ ತಮಗೆ ಸಂಬಂಧವೇ ಇಲ್ಲದಂತೆ ನಾಟಕವಾಡಿದ್ದ ಖದೀಮರು ಸುಮಾರು 2 ತಿಂಗಳ ಕಾಲ ಕದ್ದ ಕಾರನ್ನು ಗೌಪ್ಯವಾಗಿಯೇ ಮುಚ್ಚಿಟ್ಟಿದ್ದರು. ಈ ಮಧ್ಯೆ ಪ್ರಕರಣದ ತನಿಖೆ ಸ್ಪಲ್ಪ ತಣ್ಣಗಾದ ನಂತರ ಹೊಸ ಕಾರುಗಳನ್ನು ಹೊರತೆಗೆದು ಅಗ್ಗದ ಬೆಲೆಗೆ ಮಾರಾಟ ಮಾಡಿ ಮಜಾ ಉಡಾಯಿಸಿದ್ದರು.

ಕಳ್ಳತನ ಪ್ರಕರಣದಲ್ಲಿ ಇನ್ನು ನಾವು ಸಿಕ್ಕಿಕೊಳ್ಳುವುದೇ ಇಲ್ಲ ಎಂದು ಆರಾಮಾಗಿರುವುವಾಗಲೇ ತನಿಖಾಧಿಕಾರಿಗಳು ಇವರ ಹಿಂದೆ ಬಿದ್ದದ್ದರು. ಹೊಸ ಕಾರುಗಳನ್ನು ತಲಾ 6 ಲಕ್ಷಕ್ಕೆ ಮಾರಾಟ ಮಾಡಿ ಮಾಡಿದ್ದರು ಇವರು ಹೊಸ ಕಾರನ್ನು ನೋಂದಣಿ ಮಾಡಿಕೊಳ್ಳಲು ಕಾರು ಖರೀದಿಸಿ ಮಾಡಿದವರಿಗೆಯೇ ಜವಾಬ್ದಾರಿ ವಹಿಸಿದ್ದರು.

ಆಗಲೇ ನೋಡಿ, ಕಳ್ಳತನ ಜಾಡು ಪತ್ತೆ ಹಚ್ಚಲು ತಲೆಕೆಡಿಸಿಕೊಂಡಿದ್ದ ತನಿಖಾಧಿಕಾರಿಗಳಿಗೆ ಮಹತ್ವದ ಸುಳಿವು ಸಿಕ್ಕಿತ್ತು. ಕದ್ದ ಹೊಸ ಕಾರುಗಳನ್ನು ಇವತ್ತು ಇಲ್ಲವೇ ಮುಂದೊಂದು ದಿನ ಹೊರ ಬರಲೇಬೇಕು ಎಂಬ ವಿಶ್ವಾಸದಲ್ಲಿದ್ದ ತನಿಖಾಧಿಕಾರಿಗಳಿಗೆ ಆರ್ಟಿಓ ಕಚೇರಿಯಲ್ಲಿ ಈ ಮಾಹಿತಿ ದೊರೆತ್ತಿತ್ತು.

ಕಳ್ಳತನವಾದ ಕಾರು ನೋಂದಣಿಗೆ ಬಂದಾಗ ಕಾರು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರು ಮಾರಿಮುತ್ತು ಮತ್ತು ಅರುಣ್ ಕುಮಾರ್ನನ್ನು ಲಾಕ್ ಮಾಡಿಕೊಂಡಿದ್ದರು. ಆಗ ಕಾರು ಕಳ್ಳತನ ಮಾಡಿದ್ದು ನಾವೇ ಎಂದು ಒಪ್ಪಿಕೊಂಡಿಲ್ಲದೇ ಅಗ್ಗದ ಬೆಲೆಗೆ ಕಾರು ಮಾರಾಟ ಮಾಡಿದ್ದಾಗಿ ಸತ್ಯ ಬಾಯಿಬಿಟ್ಟಿದ್ದಾರೆ.
MOST READ: ಗ್ರಾಹಕನಿಗೆ ಟೋಪಿ ಹಾಕಿದ ಟಾಟಾ ಮೋಟಾರ್ಸ್..! ಮುಂದೇನಾಯ್ತು.?

ಅಪರಿಚಿತರಿಂದ ಕಾರು ಖರೀದಿಸುವಾಗ ಎಚ್ಚರ!
ಈಗೆಲ್ಲಾ ಸೆಕೆಂಡ್ ಕಾರುಗಳ ಮಾರಾಟ ಜೋರಾಗಿದೆ. ಈ ವೇಳೆ ನೀವು ದುಬಾರಿ ವಾಹನಗಳು ಅಗ್ಗದ ಬೆಲೆ ಸಿಗ್ತಾ ಇದೆ ಅಂತಾ ಆತುರ ಬಿದ್ದು ಖರೀದಿ ಮಾಡಿದ್ರೆ ಅದರಲ್ಲಿ ಮೋಸ ಹೋಗುವುದು ಗ್ಯಾರಂಟಿ. ಅದು ಕಳ್ಳತನ ಮಾಡಿದ್ದೋ ಅಥವಾ ತಾಂತ್ರಿಕವಾಗಿ ದೋಷವಿದೆಯೋ ಎನ್ನುವುದನ್ನು ಪರಿಶೀಲನೆ ಮಾಡಿ ಖರೀದಿ ಮಾಡುವುದು ಒಳಿತು.


Click it and Unblock the Notifications








