ಹೊಸ ಮೋಟಾರ್ ಕಾಯ್ದೆ ಅನುಷ್ಠಾನದಲ್ಲಿ ಗುಜರಾತ್ ಪ್ಲ್ಯಾನ್ ಕರ್ನಾಟಕದಲ್ಲಿ ಸಾಧ್ಯವಿಲ್ಲವೇ?
ಹೊಸ ಮೋಟಾರ್ ಕಾಯ್ದೆ ಜಾರಿ ನಂತರ ವಾಹನ ಸವಾರರು ಮೈ ಎಲ್ಲಾ ಕಣ್ಣು ಎನ್ನುವ ರೀತಿಯಲ್ಲಿ ಓಡಾಡುವಂತಾಗಿದ್ದು, ಯಾವ ತಪ್ಪು ಮಾಡಿದ್ರೆ ಎಷ್ಟು ದಂಡ ಜಡಿಯಬಹುದು ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಹೀಗಿರುವಾಗ ದಂಡ ಮೊತ್ತದಲ್ಲಿ ತುಸು ಬದಲಾವಣೆ ತರಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ.

ದೇಶಾದ್ಯಂತ ಸದ್ಯ ಪ್ರತಿಯೊಬ್ಬರ ಬಾಯಲ್ಲೂ ಇದೀಗ ಹೊಸ ಮೋಟಾರ್ ಕಾಯ್ದೆಯ ಕುರಿತಾಗಿ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿವೆ. ಮೊದಲಿಗೆ ವಾಹನಕ್ಕೆ ಸಂಬಂಧಿಸಿದ ಪತ್ರಗಳನ್ನು ಟ್ರಾಫಿಕ್ ಪೊಲೀಸರ ಬಳಿ ವಿಚಾರಣೆ ಮಾಡಿ ಎಲ್ಲವೂ ಸರಿಯಾಗಿದೆಯೇ ಎನ್ನುವುದು ಖಚಿತಪಡಿಸಿಕೊಂಡ ನಂತರವಷ್ಟೇ ವಾಹನ ಚಾಲನೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಹೀಗಿರುವಾಗ ಹೊಸ ಮೋಟಾರ್ ಕಾಯ್ದೆ ಅಡಿ ವಿಧಿಸಲಾಗುತ್ತಿರುವ ಭಾರೀ ಪ್ರಮಾಣದ ದಂಡದಲ್ಲಿ ಕೆಲವು ರಾಜ್ಯ ಸರ್ಕಾರಗಳು ಬದಲಾವಣೆಗಳನ್ನು ತರುತ್ತಿರುವುದೇ ಸದ್ಯದ ಚರ್ಚೆ.

ಹೌದು, ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳಿಗೂ ಅನ್ವಯವಾಗುವಂತೆ ಹೊಸ ಮೋಟಾರ್ ಕಾಯ್ದೆಯನ್ನು ಅನುಷ್ಠಾನಕ್ಕೆ ತಂದಿದ್ದರೂ ಸಹ ಕೆಲವು ರಾಜ್ಯಗಳು ಹೊಸ ಮೋಟಾರ್ ಕಾಯ್ದೆ ಜಾರಿಗೊಳಿಸಲು ಹಿಂದೇಟು ಹಾಕುತ್ತಿದ್ದರೆ ಇನ್ನು ಕೆಲವು ರಾಜ್ಯ ಸರ್ಕಾರಗಳು ದಂಡದ ಮೊತ್ತದಲ್ಲಿ ತುಸು ವಿನಾಯ್ತಿ ನೀಡುವ ಸುಳಿವು ನೀಡಿವೆ.

ಸಂಚಾರಿ ನಿಯಮ ಉಲ್ಲಂಘನೆಗಳಿಗೆ ವಿಧಿಸಲಾಗುತ್ತಿರುವ ಭಾರೀ ದಂಡದಲ್ಲಿ ಅರ್ಧದಷ್ಟು ಮೊತ್ತವನ್ನು ಕಡಿತಗೊಳಿಸುತ್ತಿರುವ ಗುಜರಾತ್ ಸರ್ಕಾರವು, ಅಲ್ಲಿನ ಜನತೆಗೆ ತುಸು ನಿರಾಳತೆ ನೀಡಿರುವುದು ಸಾಕಷ್ಟು ಚರ್ಚೆ ನಡೆಯುತ್ತಿದೆ.

ಗುಜರಾತ್ ಸರ್ಕಾರವು ಹೊರಡಿಸಿರುವ ಹೊಸ ಆದೇಶದಲ್ಲಿ ಹೆಲ್ಮೆಟ್ ಧರಿಸದೇ ಇದ್ದರೆ ರೂ. 1 ಸಾವಿರ ಬದಲಾಗಿ ರೂ. 500, ಸೀಟ್ ಬೆಲ್ಟ್ ಧರಿಸಿದೇ ಇದ್ದರೆ ರೂ. 1 ಸಾವಿರ ಬದಲಾಗಿ ರೂ. 500, ಲೈಸೆನ್ಸ್ ಇಲ್ಲದ ಬೈಕ್ ಸವಾರಿಗೆ ರೂ.5 ಸಾವಿರ ಬದಲಾಗಿ ರೂ.2 ಸಾವಿರ ಮತ್ತು ಕಾರು ಚಾಲಕರಿಗೆ ರೂ.3 ಸಾವಿರ ದಂಡ ವಿಧಿಸಲಾಗುತ್ತಿದ್ದು, ಒಂದೇ ಬಾರಿಗೆ ಭಾರೀ ದಂಡ ವಿಧಿಸುವುದರಿಂದ ವಾಹನ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಬಾರದು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಹಾಗಂತ ಹೊಸ ನಿಯಮದ ಕುರಿತು ನಾವು ವಿರೋಧ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿರುವ ಗುಜರಾತ್ ಸಿಎಂ ವಿಜಯ್ ರೂಪಾನಿ ಅವರು, ಒಂದೇ ಬಾರಿಗೆ ಭಾರೀ ದಂಡ ವಿಧಿಸುವುದಕ್ಕಿಂತ ಹೊಸ ಸಂಚಾರಿ ನಿಯಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ನಂತರವಷ್ಟೇ ಕಠಿಣ ಕ್ರಮ ಜಾರಿಗೆ ತರುವುದಷ್ಟೇ ನಮ್ಮ ಉದ್ದೇಶ ಎಂದಿದ್ದಾರೆ.

ಹೀಗಾಗಿ ಕರ್ನಾಟಕದಲ್ಲೂ ಜಾರಿಯಾಗಿರುವ ಹೊಸ ಸಂಚಾರಿ ನಿಯಮದಡಿ ವಸೂಲಿ ಮಾಡಲಾಗುತ್ತಿರುವ ಭಾರೀ ದಂಡದ ಪ್ರಮಾಣದಲ್ಲಿ ಕಡಿತ ಮಾಡುವಂತೆ ಒತ್ತಡಗಳು ಕೇಳಿಬರುತ್ತಿದ್ದು, ಏಕಾಏಕಿ ದೊಡ್ಡ ಮೊತ್ತದ ದಂಡ ವಿಧಿಸುವುದಕ್ಕಿಂತ ಗುಜರಾತ್ ಮಾದರಿಯನ್ನು ಅನುಸರಿಸಿ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.
MOST READ: ದಂಡದಿಂದ ತಪ್ಪಿಸಿಕೊಳ್ಳಲು ವಾಹನ ಸವಾರರಿಗೆ ಹೊಸ ಮಾರ್ಗ ಸೂಚಿಸಿದ ಬೆಂಗಳೂರು ಪೊಲೀಸರು..!

ಆದರೆ ಈ ಕುರಿತು ಕರ್ನಾಟಕ ಸರ್ಕಾರ ಯಾವುದೇ ರೀತಿ ಪ್ರಕ್ರಿಯೆ ನೀಡಿಲ್ಲವಾದರೂ ಗುಜರಾತ್ನಲ್ಲಿ ಜಾರಿಗೆ ತಂದಿರುವ ಹೊಸ ನಿಯಮದಲ್ಲಿನ ವಿನಾಯ್ತಿಯನ್ನು ರಾಜ್ಯದಲ್ಲೂ ಜಾರಿಗೆ ಮಾಡಬಹುದಾದ ಎಲ್ಲಾ ಅವಕಾಶಗಳಿದ್ದು, ಮೊದಲು ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸುವುದು ಅವಶ್ಯಕತೆಯಿದೆ ಎಂದರೆ ತಪ್ಪಾಗುವುದಿಲ್ಲ.
MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಇನ್ನು ಹೊಸ ಮೋಟಾರ್ ಕಾಯ್ದೆ ಜಾರಿಗೆ ಬಂದ ಕ್ಷಣದಿಂದಲೇ ತೀವ್ರ ತಪಾಸಣೆ ನಡೆಸಿರುವ ಟ್ರಾಫಿಕ್ ಪೊಲೀಸರು ಹೊಸ ಕಾಯ್ದೆ ಅಡಿ ಭರ್ಜರಿ ದಂಡವಿಧಿಸುತ್ತಿದ್ದು, ಬೆಂಗಳೂರಿನಲ್ಲಿಯೇ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ.
MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಭರ್ಜರಿ ದಂಡಗಳ ಹೊರತಾಗಿಯೂ ವಿವಿಧ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಿಂದ ಬರೋಬ್ಬರಿ 1 ಕೋಟಿಗೂ ಅಧಿಕ ದಂಡ ವಸೂಲಿ ಮಾಡಲಾಗಿದ್ದು, ಪದೇ ಪದೇ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದ ವಾಹನ ಸವಾರರು ಹೊಸ ದಂಡದ ಮೊತ್ತ ನೋಡಿ ಶಾಕ್ ಆಗಿದ್ದಾರೆ.

ಅಧಿಕೃತವಾಗಿ ಚಾಲನಾ ಪರವಾನಿಗೆ ಪಡೆಯದೇ ವಾಹನಗಳನ್ನು ಚಾಲನೆ ಮಾಡುವ ವಾಹನ ಸವಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಲೆಸೆನ್ಸ್ ಹೊಂದದೇ ವಾಹನ ಚಾಲನೆಗೆ ಮುಂದಾದರೆ ರೂ.5 ಸಾವಿರ ದಂಡ ವಿಧಿಸಲಾಗುತ್ತಿದ್ದು, ಅಪ್ರಾಪ್ತರ ಕೈಗೆ ವಾಹನಗಳನ್ನು ನೀಡುವ ಪೋಷಕರಿಗೂ ಭರ್ಜರಿ ದಂಡವನ್ನು ವಿಧಿಸಲಾಗುತ್ತಿದೆ.

ಹಾಗೆಯೇ ಹೆಲ್ಮೆಟ್ ರಹಿತ ಬೈಕ್ ಸವಾರಿ, ತ್ರಿಬಲ್ ರೈಡಿಂಗ್, ಕಾನೂನು ಬಾಹಿರವಾಗಿ ವಾಹನಗಳನ್ನು ಮಾಡಿಫೈ ಮಾಡುವುದು, ಚಾಲನೆ ವೇಳೆ ಇಯರ್ ಫೋನ್ ಬಳಕೆ ಮತ್ತು ಫುಟ್ಪಾತ್ಗಳ ಮೇಲೆ ವಾಹನಗಳ ಚಾಲನೆ ಸೇರಿದಂತೆ ವಿವಿಧ ಮಾದರಿಯ ಸಂಚಾರಿ ನಿಯಮ ಉಲ್ಲಂಘನೆಗಳ ವಿರುದ್ಧ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತಿದ್ದು, ಯಾವುದೇ ಕಾರಣಕ್ಕೂ ನೀವು ಕೂಡಾ ಸಂಚಾರಿ ನಿಯಮಗಳನ್ನು ಮೀರಿ ದಂಡಕ್ಕೆ ಗುರಿಯಾಗಬೇಡಿ.


Click it and Unblock the Notifications








