ಗಂಗಾ ಎಕ್ಸ್ಪ್ರೆಸ್ವೇಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿರವರು ಇಂದು ಉತ್ತರ ಪ್ರದೇಶದ ಶಹಜಹಾನ್ಪುರದಲ್ಲಿ ಗಂಗಾ ಎಕ್ಸ್ಪ್ರೆಸ್ವೇಗೆ ಶಂಕುಸ್ಥಾಪನೆ ನೆರವೇರಿಸಿದರು. ರೂ. 36,200 ಕೋಟಿ ವೆಚ್ಚದಲ್ಲಿ ಗಂಗಾ ಎಕ್ಸ್ಪ್ರೆಸ್ವೇ ನಿರ್ಮಾಣವಾಗಲಿದೆ. 594 ಕಿ.ಮೀ ಉದ್ದದ ಈ ಎಕ್ಸ್ಪ್ರೆಸ್ವೇ ಉತ್ತರಪ್ರದೇಶದ 10 ಜಿಲ್ಲೆಗಳಲ್ಲಿ ಹಾದು ಹೋಗುತ್ತದೆ. ಈ ಎಕ್ಸ್ ಪ್ರೆಸ್ ವೇ ಮೀರತ್ನಿಂದ ಪ್ರಯಾಗರಾಜ್ಗೆ ನೇರ ಸಂಪರ್ಕವನ್ನು ಒದಗಿಸುತ್ತದೆ.

ಈ ಎಕ್ಸ್ ಪ್ರೆಸ್ ವೇ ನಿರ್ಮಾಣ ಕಾಮಗಾರಿಯು ಮುಂದಿನ 26 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಗಂಗಾ ಎಕ್ಸ್ಪ್ರೆಸ್ವೇ ಮೀರತ್ನ ಬಿಜೌಲಿ ಗ್ರಾಮದಿಂದ ಆರಂಭವಾಗಲಿದ್ದು, ಪ್ರಯಾಗರಾಜ್ನ ಜುಡಾಪುರ ದಾಂಡು ಗ್ರಾಮದಲ್ಲಿ ಕೊನೆಗೊಳ್ಳಲಿದೆ. ಈ ಎಕ್ಸ್ಪ್ರೆಸ್ವೇ ಉತ್ತರ ಪ್ರದೇಶದ 10 ಜಿಲ್ಲೆಗಳ 519 ಗ್ರಾಮಗಳ ಮೂಲಕ ಹಾದು ಹೋಗಲಿದ್ದು ಮೀರತ್, ಹಾಪುರ್, ಬುಲಂದ್ಶಹರ್, ಅಮ್ರೋಹಾ, ಸಂಭಾಲ್, ಬದೌನ್, ಶಹಜಹಾನಪುರ, ಹಾರ್ಡೊಯ್, ಉನ್ನಾವೊ, ರಾಯ್ ಬರೇಲಿ, ಪ್ರತಾಪಗಢ ಹಾಗೂ ಪ್ರಯಾಗರಾಜ್ ಸೇರಿದಂತೆ ಹಲವು ನಗರಗಳನ್ನು ಸಂಪರ್ಕಿಸಲಿದೆ.

ಈ ಎಕ್ಸ್ಪ್ರೆಸ್ವೇ ಮೀರತ್ನಲ್ಲಿ 15 ಕಿ.ಮೀ, ಹಾಪುರದಲ್ಲಿ 33 ಕಿ.ಮೀ, ಬುಲಂದ್ಶಹರ್ನಲ್ಲಿ 11 ಕಿ.ಮೀ, ಅಮ್ರೋಹಾದಲ್ಲಿ 26 ಕಿ.ಮೀ, ಸಂಭಾಲ್ನಲ್ಲಿ 39 ಕಿ.ಮೀ, ಬುಡಾನ್ನಲ್ಲಿ 92 ಕಿ.ಮೀ, ಶಹಜಹನ್ಪುರದಲ್ಲಿ 40 ಕಿ.ಮೀ, ಹಾರ್ಡೊಯ್ನಲ್ಲಿ 99 ಕಿ.ಮೀ, ಉನ್ನಾವೊದಲ್ಲಿ 105 ಕಿ.ಮೀ, ರಾಯ್ ಬರೇಲಿಯಲ್ಲಿ 77 ಕಿ.ಮೀ, ಪ್ರತಾಪಗಢದಲ್ಲಿ 41 ಕಿ.ಮೀ ಹಾಗೂ ಪ್ರಯಾಗರಾಜ್'ನಲ್ಲಿ 16 ಕಿ.ಮೀ ಹಾದು ಹೋಗಲಿದೆ.

ಉದ್ದೇಶಿತ ಗಂಗಾ ಎಕ್ಸ್ಪ್ರೆಸ್ವೇ 6 ಪಥಗಳನ್ನು ಹೊಂದಿರಲಿದ್ದು, ಅಗತ್ಯಬಿದ್ದರೆ 8 ಪಥಗಳಿಗೆ ವಿಸ್ತರಿಸಲಾಗುವುದು. ಗಂಗಾ ಎಕ್ಸ್ಪ್ರೆಸ್ವೇಯಲ್ಲಿ ಚಲಿಸುವ ವಾಹನಗಳ ವೇಗದ ಮಿತಿಯನ್ನು ಪ್ರತಿ ಗಂಟೆಗೆ ಗರಿಷ್ಠ 120 ಕಿ.ಮೀಗಳಿಗೆ ಸೀಮಿತಗೊಳಿಸಲಾಗುತ್ತದೆ. ಈ ಎಕ್ಸ್ಪ್ರೆಸ್ವೇ ಮಾನವರಹಿತ ಟೋಲ್ ಬೂತ್ ಸೌಲಭ್ಯವನ್ನು ಹೊಂದಿದ್ದು, ಫಾಸ್ಟ್ಟ್ಯಾಗ್ ಮೂಲಕ ವಾಹನಗಳಿಂದ ಟೋಲ್ ಶುಲ್ಕ ಸಂಗ್ರಹಿಸಲಾಗುತ್ತದೆ.

ಈ ಎಕ್ಸ್ಪ್ರೆಸ್ವೇ ದೆಹಲಿ - ಪ್ರಯಾಗರಾಜ್ ನಡುವಿನ ಪ್ರಯಾಣದ ಸಮಯವನ್ನು 10-11 ಗಂಟೆಗಳಿಂದ ಕೇವಲ 6-7 ಗಂಟೆಗಳಿಗೆ ಇಳಿಸಲಿದೆ. ಈ ಎಕ್ಸ್ಪ್ರೆಸ್ವೇಯಲ್ಲಿ ಗಂಗಾ ನದಿಯ ಮೇಲೆ ಸುಮಾರು ಒಂದು ಕಿ.ಮೀ ಉದ್ದದ ಸೇತುವೆ ಹಾಗೂ ರಾಮಗಂಗಾ ನದಿಯ ಮೇಲೆ 720 ಮೀಟರ್ ಉದ್ದದ ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿದೆ. ಒಟ್ಟಾರೆಯಾಗಿ ಗಂಗಾ ಎಕ್ಸ್ಪ್ರೆಸ್ವೇಯಲ್ಲಿ ಸುಮಾರು 14 ಪ್ರಮುಖ ಸೇತುವೆಗಳು, 126 ಸಣ್ಣ ಸೇತುವೆಗಳು, 929 ಕಲ್ವರ್ಟ್ಗಳು, 7 ಆರ್ಒಬಿಗಳು, 28 ಫ್ಲೈಓವರ್ಗಳು ಹಾಗೂ 8 ಡೈಮಂಡ್ ಇಂಟರ್ಚೇಂಜ್ಗಳು ಇರಲಿವೆ.

ರೈಲ್ವೆ ಓವರ್ಬ್ರಿಡ್ಜ್ನ ಅಗಲ 120 ಮೀಟರ್ ಆಗಿರಲಿದೆ. ಗಂಗಾ ಎಕ್ಸ್ಪ್ರೆಸ್ವೇಯಲ್ಲಿ ಮೀರತ್ ಹಾಗೂ ಪ್ರಯಾಗರಾಜ್ನಲ್ಲಿ ಎರಡು ಪ್ರಮುಖ ಟೋಲ್ ಪ್ಲಾಜಾಗಳಿರಲಿವೆ. ಇದರ ಜೊತೆಗೆ ಈ ಎಕ್ಸ್ಪ್ರೆಸ್ವೇಯಲ್ಲಿ 15 ರಾಂಪ್ ಟೋಲ್ ಪ್ಲಾಜಾಗಳು ಸಹ ಇರಲಿವೆ. ವಾಯುಪಡೆಯ ಬಳಕೆಗಾಗಿ ಸುಲ್ತಾನಪುರ ಜಿಲ್ಲೆಯ ಗಂಗಾ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ವಾಯುನೆಲೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ದಾರಿ ತಪ್ಪಿ ಬರುವ ಪ್ರಾಣಿಗಳು ಹಾಗೂ ಸ್ಥಳೀಯ ಜನರ ಚಲನವಲನವನ್ನು ಪರೀಕ್ಷಿಸಲು ಎಕ್ಸ್ಪ್ರೆಸ್ವೇಯ ಉದ್ದಕ್ಕೂ ಕಾಂಕ್ರೀಟ್ ತಡೆ ಗೋಡೆ ನಿರ್ಮಿಸಲಾಗುವುದು. ಗಂಗಾ ಎಕ್ಸ್ಪ್ರೆಸ್ ವೇ ಯೋಜನೆಯನ್ನು ಸಕಾಲಕ್ಕೆ ಪೂರ್ಣಗೊಳಿಸಲು 12 ಪ್ಯಾಕೇಜ್ಗಳಾಗಿ ವಿಂಗಡಿಸಲಾಗಿದೆ ಎಂದು ಉತ್ತರ ಪ್ರದೇಶ ಎಕ್ಸ್ಪ್ರೆಸ್ ವೇ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ ಹೇಳಿದೆ. ಈ ಯೋಜನೆಯ ಕಾಮಗಾರಿಯನ್ನು ಕಾಲ ಕಾಲಕ್ಕೆ ಪರಿಶೀಲಿಸಲಾಗುವುದು ಎಂದು ಪ್ರಾಧಿಕಾರ ಹೇಳಿದೆ.

ಇತ್ತೀಚೆಗೆ ಉದ್ಘಾಟನೆಗೊಂಡ ಪೂರ್ವಾಂಚಲ್ ಎಕ್ಸ್ಪ್ರೆಸ್ವೇಯಂತೆ, ಗಂಗಾ ಎಕ್ಸ್ಪ್ರೆಸ್ವೇ ಸಹ ಭಾರತೀಯ ಸೇನೆಯ ಫೈಟರ್ ಜೆಟ್ಗಳ ಟೇಕ್ ಆಫ್ ಹಾಗೂ ಲ್ಯಾಂಡಿಂಗ್ಗಾಗಿ ತುರ್ತು ಏರ್ ಸ್ಟ್ರಿಪ್ ಸೌಲಭ್ಯವನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ. 3.5 ಕಿ.ಮೀ ಉದ್ದದ ಈ ಏರ್ ಸ್ಟ್ರಿಪ್ ಅನ್ನು ಶಹಜಹಾನ್ಪುರದ ಎಕ್ಸ್ಪ್ರೆಸ್ವೇ ಭಾಗದಲ್ಲಿ ನಿರ್ಮಿಸಲಾಗುವುದು.

ಈ ಎಕ್ಸ್ಪ್ರೆಸ್ವೇಯಲ್ಲಿ ವಾಹನಗಳ ತುರ್ತು ಸೇವೆಯ ಜೊತೆಗೆ, ಪ್ರಯಾಣದ ಸಮಯದಲ್ಲಿ ವಿಶ್ರಾಂತಿ ಮತ್ತು ಆಹಾರಕ್ಕಾಗಿ ಹೋಟೆಲ್ ಮತ್ತು ರೆಸ್ಟ್ರೂಮ್ ಸೌಲಭ್ಯಗಳನ್ನು ಸಹ ಲಭ್ಯಗೊಳಿಸಲಾಗುತ್ತದೆ. ಇದರ ಜೊತೆಗೆ ಚಾರ್ಜಿಂಗ್ ಸ್ಟೇಷನ್ ಹಾಗೂ ಎಲೆಕ್ಟ್ರಿಕ್ ವಾಹನಗಳಿಗೆ ಬ್ಯಾಟರಿ ವಿನಿಮಯ ಕೇಂದ್ರಗಳು ಸಹ ಲಭ್ಯವಿರುತ್ತವೆ. ಶಹಜಹಾನ್ಪುರದಲ್ಲಿ ಗಂಗಾ ಎಕ್ಸ್ಪ್ರೆಸ್ವೇಗೆ ಶಂಕುಸ್ಥಾಪನೆ ನೆರವೇರಿಸಿ ಪ್ರಧಾನಿ ನರೇಂದ್ರ ಮೋದಿರವರು ಮಾತನಾಡಿದರು.

ಕಾಕೋರಿಯಿಂದ ಕ್ರಾಂತಿಯ ಜ್ವಾಲೆಯನ್ನು ಎಬ್ಬಿಸಿ ಅವರ ಪಾದಗಳನ್ನು ಮುಟ್ಟಿದ ವೀರ ಹುತಾತ್ಮ ಕ್ರಾಂತಿಕಾರಿಗಳಾದ ರಾಮಪ್ರಸಾದ್ ಬಿಸ್ಮಿಲ್, ಅಶ್ಫಾಕುಲ್ಲಾ ಖಾನ್ ಹಾಗೂ ರೋಷನ್ ಸಿಂಗ್ ಅವರಿಗೆ ನಾನು ನಮಸ್ಕರಿಸುತ್ತೇನೆ. ಇಲ್ಲಿರುವ ಮಣ್ಣನ್ನು ಹಣೆಗೆ ಹಚ್ಚಲು ನನಗೆ ಅವಕಾಶ ಸಿಕ್ಕಿತು ಎಂದು ಹೇಳಿದರು. ಉತ್ತರ ಪ್ರದೇಶಕ್ಕೆ ಪ್ರಗತಿಯ ಬಾಗಿಲು ತೆರೆಯುತ್ತದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಗಂಗಾ ಎಕ್ಸ್ಪ್ರೆಸ್ವೇಯಿಂದಾಗುವ ಅನುಕೂಲಗಳನ್ನು ವಿವರಿಸಿದ ಪ್ರಧಾನಿ ಮೋದಿ, ಈ ಎಕ್ಸ್ಪ್ರೆಸ್ವೇ ಪ್ರದೇಶಗಳ ನಡುವೆ ಉತ್ತಮ ಸಂಪರ್ಕವನ್ನು ಒದಗಿಸುವುದಲ್ಲದೆ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಗಂಗಾ ಎಕ್ಸ್ಪ್ರೆಸ್ವೇ ನಿರ್ಮಾಣದಿಂದ, ಈ ಪ್ರದೇಶದಲ್ಲಿ ಅನೇಕ ಕೈಗಾರಿಕೆಗಳು ತಲೆ ಎತ್ತಲಿವೆ. ಸಣ್ಣ ಪ್ರಮಾಣದ ಕೈಗಾರಿಕೆಗಳು ರೈತರ ಆದಾಯವನ್ನು ಹೆಚ್ಚಿಸಲು ನೆರವಾಗುತ್ತವೆ ಎಂದು ಹೇಳಿದರು.

ಗಂಗಾ ಎಕ್ಸ್ಪ್ರೆಸ್ವೇ ಪೂರ್ವ - ಪಶ್ಚಿಮ ಉತ್ತರಪ್ರದೇಶವನ್ನು ಸಂಪರ್ಕಿಸುವುದಲ್ಲದೆ ದೆಹಲಿಗೆ ಹಾಗೂ ಅಲ್ಲಿಂದ ಬರುವ ಪ್ರಯಾಣಿಕರಿಗೆ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ ಎಂದು ಅವರು ಹೇಳಿದರು. ಗಂಗಾ ಎಕ್ಸ್ಪ್ರೆಸ್ವೇ ನಿರ್ಮಾಣ ಮತ್ತು ನಿರ್ವಹಣೆಗಾಗಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ 30 ವರ್ಷಗಳ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ.

ಈ ಎಕ್ಸ್ಪ್ರೆಸ್ವೇ ಲಲಿತ್ಪುರದಲ್ಲಿ ನಿರ್ಮಿಸಲಿರುವ ವಿಮಾನ ನಿಲ್ದಾಣ ಹಾಗೂ ಬುಂದೇಲ್ಖಂಡದ ರಕ್ಷಣಾ ಕಾರಿಡಾರ್ಗೆ ಸಂಪರ್ಕ ಕಲ್ಪಿಸುತ್ತದೆ. ಬುಂದೇಲ್ಖಂಡ್ ವಿಮಾನ ನಿಲ್ದಾಣವನ್ನು ದೇಶಿಯ ವಿಮಾನಗಳಿಗಾಗಿ ಉದ್ಘಾಟಿಸಲಾಗುವುದು. ನಂತರ ಅದನ್ನು ಅಂತಾರಾಷ್ಟ್ರೀಯ ವಿಮಾನಗಳಿಗೂ ಅಭಿವೃದ್ಧಿಪಡಿಸಲಾಗುವುದು.
ಗಮನಿಸಿ: ಈ ಲೇಖನದಲ್ಲಿರುವ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.


Click it and Unblock the Notifications