ದೇಶದ ಪ್ರಥಮ ಬೈಕ್ ಆಂಬುಲೆನ್ಸ್ ಸೇವೆ ಬೆಂಗ್ಳೂರಲ್ಲಿ ಆರಂಭ
ಏಷ್ಯಾದ ಮೊದಲ ಸರ್ಕಾರಿ ಹಾಗೂ ದೇಶದ ಪ್ರಪ್ರಥಮ ಬೈಕ್ ಆಂಬುಲೆನ್ಸ್ ಸೇವೆಗೆ ಕರ್ನಾಟಕ ರಾಜ್ಯ ಸರಕಾರ ಚಾಲನೆ ನೀಡಿದೆ. ದಿನದಿಂದ ದಿನಕ್ಕೆ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಹಾಗಾಗಿ ಅಪಘಾತ ಸ್ಥಳಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ ಅಥವಾ ತುಂಬಾನೇ ವಿಳಂಬವಾಗುತ್ತಿದೆ. ಇದನ್ನು ಮನಗಂಡಿರುವ ರಾಜ್ಯ ಸರಕಾರ ಜನರ ಸೇವೆಗಾಗಿ ವಿನೂತನ ಯೋಜನೆ ಆರಂಭಿಸಿದೆ.
ಬೈಕ್ ಆಂಬುಲೆನ್ಸ್ ಮುಖಾಂತರ ತುರ್ತಾಗಿ ಪ್ರಥಮ ಚಿಕಿತ್ಸೆ ಒದಗಿಸಲು ಸಾಧ್ಯವಾಗಲಿದೆ. ಇದಕ್ಕಾಗಿ ಚಾಲಕರಿಗೆ ತರಬೇತಿ ಕೂಡಾ ನೀಡಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಅಲ್ಲದೆ ಎಪ್ರಿಲ್ 15 ಬುಧವಾರದಿಂದಲೇ 21 ಬೈಕ್ ಗಳು ನಗರದೆಲ್ಲೆಡೆ ಬೈಕ್ ಆಂಬುಲೆನ್ಸ್ ಸೇವೆಯನ್ನು ಆರಂಭಿಸಲಿದ್ದು, ಮುಂದಿನ ದಿನಗಳಲ್ಲಿ ಇತರೆಡೆಗಳಿಗೂ ವ್ಯಾಪಿಸಲಿದೆ.

ಈಗ ಲಭ್ಯವಿರುವ ಮಾಹಿತಿಯ ಪ್ರಕಾರ ಅಪಘಾತ ನಡೆದಾಗ '108' ಎಂಬ ಸೇವಾ ನಂಬರ್ ಗೆ ಕರೆ ಮಾಡಿದಾಗ ಆ ನಿರ್ದಿಷ್ಟ ಪ್ರದೇಶದ ವಾಹನ ದಟ್ಟಣೆಯನ್ನು ಜಿಪಿಎಸ್ ನಲ್ಲಿ ಗಮನಿಸಿಕೊಂಡು ಬೈಕ್ ಆಂಬುಲೆನ್ಸ್ ಸೇವೆ ಒದಗಿಸಲಾಗುವುದು.
ಇದಕ್ಕಾಗಿ ಬಜಾಜ್ ಅವೆಂಜರ್ ಬೈಕ್ ಉಪಯೋಗಿಸಲಾಗಿದ್ದು, ಎರಡು ಲಕ್ಷ ರು.ಗಳಷ್ಟು ದುಬಾರಿಯಾಗಿದೆ ಎಂಬುದು ತಿಳಿದು ಬಂದಿದೆ. ಅಲ್ಲದೆ ಇದರಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಯ ಜೊತೆಗೆ ಆಮ್ಲಜನಕ, ಸೈರನ್ ದೀಪ ಹಾಗೂ ಮೈಕ್ ವ್ಯವಸ್ಥೆ ಇರಲಿದೆ. ಇಲ್ಲಿ ಗಮನಾರ್ಹವೆಂದರೆ ಪ್ರಥಮ ಚಿಕಿತ್ಸೆಯನ್ನು ಚಾಲಕರೇ ಒದಗಿಸಲಿದ್ದಾರೆ.

ಇಲ್ಲಿ ಸಾಮಾನ್ಯ ಜನರಲ್ಲಿ ಮೂಡಿಬರುತ್ತಿರುವ ಪ್ರಶ್ನೆಯೆಂದರೆ ಚಾಲಕರು ಸಂಚಾರ ಪೊಲಸ್ ವಿಭಾಗಕ್ಕೆ ಸೇರಿದವರಾಗಿದ್ದುದ್ದರಿಂದ ದಾದಿಯರ ಅಭಾವದಲ್ಲಿ ಹೇಗೆ ಒಬ್ಬರು ಮಾತ್ರ ಪ್ರಥಮ ಚಿಕಿತ್ಸೆ ಒದಗಿಸಲು ಸಾಧ್ಯ? ಇದಕ್ಕಾಗಿ ವಿಶೇಷ ತರಬೇತಿ ನೀಡಲಾಗಿದೆಯೇ? ಹಾಗೊಂದು ವೇಳೆ ಅಪಘಾತಕ್ಕೀಡಾದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಬೇಕಾದ ತುರ್ತು ಪರಿಸ್ಥಿತಿ ಎದುರಾದರೆ ಇತರರ ನೆರವು ಇಲ್ಲದೆಯೇ ಒಬ್ಬರಿಗೆ ಮಾತ್ರ (ಚಾಲಕ) ಈ ಕರ್ತವ್ಯ ನಿಭಾಯಿಸಲು ಸಾಧ್ಯವೇ? ಅಪಘಾತದಲ್ಲಿ ಗಾಯವಾದವರನ್ನು ಬೈಕ್ ನಲ್ಲಿ ಕುರಿಸುವುದಾದರೂ ಹೇಗೆ? ಅಲ್ಲ ವೈದ್ಯರು ಅಥವಾ ದಾದಿಯರೇ ವಾಹನ ಚಾಲನೆಯನ್ನು ಕಳಿಯಬೇಕೇ? ನೀವೇ ಉತ್ತರಿಸಿ...


Click it and Unblock the Notifications








