ಹತ್ತೋಕೆ ರೆಡಿಯಾಗ್ರಿ ಸ್ವಾಮಿ- ಇನ್ಮುಂದೆ ಬೆಂಗಳೂರಿನಲ್ಲೂ ಸಿಗ್ತಾವೆ ಬಾಡಿಗೆ ಸೈಕಲ್..!!
ವಾಹನ ದಟ್ಟಣೆಯಿಂದಾಗಿ ಪರಿಸರ ಮಾಲಿನ್ಯ ಹೆಚ್ಚುತ್ತಿದ್ದು, ಇದನ್ನು ತಗ್ಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೊಸದೊಂದು ಯೋಜನೆ ಜಾರಿಗೆ ತಂದಿದ್ದು, ಇನ್ಮುಂದೆ ಬೆಂಗಳೂರಿನಲ್ಲಿ ಬಾಡಿಗೆ ಸೈಕಲ್ಗಳ ಸೇವೆ ಆರಂಭವಾಗಲಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹದಗೆಡುತ್ತಿರುವ ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿನೂತನ ಯೋಜನೆಯನ್ನು ಜಾರಿಗೆ ತರಲು ಉದ್ದೇಶಿಸಿದ್ದು, ಬಾಡಿಗೆ ಸೈಕಲ್ ಯೋಜನೆಗೆ ಬಜೆಟ್ನಲ್ಲಿ ಅನುಮೋದನೆ ಕೂಡಾ ನೀಡಲಾಗಿದೆ.

ಮುಂಜಾನೆಯಿಂದಲೇ ಬಜೆಟ್ ಪ್ರಮುಖಾಂಶಗಳನ್ನು ನೋಡುತ್ತಿದ್ದ ಜನತೆಗೆ ಸಿಎಂ ಸಿದ್ಧರಾಮಯ್ಯನವರು ಹತ್ತಾರು ಯೋಜನೆಗಳನ್ನು ಘೋಷಣೆ ಮಾಡುವುದರ ಮೂಲಕ ಜನಪರ ಕಾಳಜಿಗೆ ರಾಜ್ಯ ಸರ್ಕಾರ ಬದ್ಧ ಎಂದಿದ್ದಾರೆ. ಇದರೊಂದಿಗೆ ಬಾಡಿಗೆ ಸೈಕಲ್ ಒದಗಿಸುವ ಯೋಜನೆಗೂ ಅಸ್ತು ಎಂದಿದ್ದು, ಇದರಿಂದ ವಾಹನ ಸೌಲಭ್ಯ ಇಲ್ಲದೆ ಪರದಾಡುವ ಜನರಿಗೆ ಅನುಕೂಲವಾಗಲಿದೆ.

ರಾಜ್ಯ ಸರ್ಕಾರದ ವಿನೂತನ ಯೋಜನೆ ಸದ್ಯದಲ್ಲೇ ಜಾರಿಗೆ ಬರಲಿದ್ದು, ಯೋಜನೆಯಿಂದಾಗಿ ಪರಿಸರ ಮಾಲಿನ್ಯಕ್ಕೂ ಬ್ರೇಕ್ ಬೀಳಲಿದೆ. ಜೊತೆಗೆ ನಿಮಗೆ ಬೇಕಾದ ಜಾಗಕ್ಕೆ ಎಷ್ಟು ಸಮಯವಾದ್ರೂ ಪ್ರಯಾಣ ಮಾಡಬಹುದಾಗಿದ್ದು, ಅನಗತ್ಯ ಖರ್ಚು ತಗ್ಗಲಿದೆ.

ಬಾಡಿಗೆ ಸೈಕಲ್ ಒದಗಿಸುವ ಯೋಜನೆ ಈಗಾಗಲೇ ಮೈಸೂರು ನಗರದಲ್ಲಿ ಜಾರಿಗೆ ಬಂದಿದ್ದು, ಪ್ರವಾಸಿಗರಿಗೆ ಪ್ರತಿ ಗಂಟೆಗೆ 15 ರೂಪಾಯಿಯಂತೆ ಸೈಕಲ್ ಒದಗಿಸಲಾಗುತ್ತಿದೆ. ಅದೇ ರೀತಿಯಾಗಿ ಬೆಂಗಳೂರಿನಲ್ಲೂ ಜಾರಿಯಾಗಲಿದ್ದು, ನಗರದೆಲ್ಲೆಡೆ ಸೈಕಲ್ಗಳ ಟ್ರಿಣ್ ಟ್ರಿಣ್ ಸದ್ದು ಕೇಳಲಿದೆ.

ಇದಕ್ಕಾಗಿ ನಗರದ ಪ್ರಮುಖ ಕಡೆಗಳಲ್ಲಿ ಸೈಕಲ್ ಸ್ಟ್ಯಾಂಡ್ ನಿರ್ಮಾಣ, ನಿಲ್ದಾಣಕ್ಕೆ ಅಗತ್ಯವಿರುವ ವಿದ್ಯುತ್ ಸಂಪರ್ಕ, ಸ್ಮಾರ್ಟ್ಕಾರ್ಡ್ ಸ್ವೆಪ್ ಮಾಡುವ ಯಂತ್ರಗಳ ಅಳವಡಿಕೆ ಸೇರಿದಂತೆ ಇನ್ನಿತರ ಸಿದ್ಧತೆಗಳನ್ನು ಮಾಡಬೇಕಿದ್ದು, ಮೆಟ್ರೋ ನಿಲ್ದಾಣಗಳಲ್ಲೂ ಬಾಡಿಗೆ ಸೈಕಲ್ಗಳ ಸೇವೆ ದೊರೆಯಲಿದೆ.

ಬಾಡಿಗೆ ಸೈಕಲ್ ಪಡೆಯುವುದು ಹೇಗೆ?
ಸೂಕ್ತ ವಾಹನ ಸೌಲಭ್ಯವಿಲ್ಲದೆ ಪರದಾಡುವ ಸಾರ್ವಜನಿಕರು ನಗರದ ವಿವಿಧ ಕಡೆಗಳಿಗೆ ತೆರಳಬೇಕಾದ ಸಂದರ್ಭದಲ್ಲಿ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ. ಇದಕ್ಕಾಗಿ ನಗರದ ಪ್ರಮುಖ ಬಸ್ ನಿಲ್ದಾಣ ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಈ ಸೌಲಭ್ಯ ದೊರೆಯಲಿದೆ.

ಸೈಕಲ್ನಲ್ಲಿ ಓಡಾಡ ಬಯಸುವವರು ನಗರದಲ್ಲಿರುವ ಯಾವುದಾದರೊಂದು ನೋಂದಣಿ ಕೇಂದ್ರದಲ್ಲಿ ತಮ್ಮ ಗುರುತಿನ ಚೀಟಿ ಅಥವಾ ವಿಳಾಸದ ಚೀಟಿಯನ್ನು ಪ್ರದರ್ಶಿಸಿದರೆ ಅವರಿಗೆ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ. ಇದನ್ನು ಎಲ್ಲಿ ಬೇಕಾದರೂ ಬಳಸಬಹುದಾಗಿದ್ದು, ನಿಮ್ಮ ಅನುಕೂಲಕತೆಗೆ ತಕ್ಕಂತೆ ಸೈಕಲ್ ಪಡೆಯಬಹುದು.

ಇನ್ನು ಪ್ರತಿ ಗಂಟೆಗೆ ಎಷ್ಟು ಪಾವತಿ ಮಾಡಬೇಕೇಂಬದು ಇನ್ನೂ ನಿರ್ಧಾರವಾಗಿಲ್ಲ. ಆದ್ರೆ ಮೈಸೂರಿನಲ್ಲಿರುವಂತೆ ಒಂದು ಗಂಟೆಗೆ 15 ರೂ., ನಂತರದ ಪ್ರತಿ ಅರ್ಧ ಗಂಟೆಗೆ 10 ರೂಪಾಯಿಯಂತೆ ನಿಗದಿ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಈಗಾಗಲೇ ಮೈಸೂರಿನಲ್ಲಿ ಬಾಡಿಗೆ ಸೈಕಲ್ಗಳ ಸೇವೆ ಆರಂಭವಾಗಿದ್ದು, ಅರಮನೆ, ರೈಲು ನಿಲ್ದಾಣ, ಕೇಂದ್ರ ಬಸ್ ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿ, ನಗರ ಪಾಲಿಕೆ ಕಚೇರಿ, ಜಯನಗರದ ಪಾಲಿಕೆ ವಲಯ ಕಚೇರಿ ಹಾಗೂ ಮೃಗಾಲಯದ ಸಮೀಪ ನೋಂದಣಿ ಕೇಂದ್ರವನ್ನು ತೆರೆಯಲಾಗಿದೆ. ಅಲ್ಲದೇ ವಿನೂತನ ಯೋಜನೆಗೆ ಜನ ಕೂಡಾ ಸಖತ್ ರೆಸ್ಪಾನ್ಸ್ ಕೂಡಾ ಬಂದಿದೆ.

ಎಲ್ಲವೂ ಅಂದಕೊಂಡತೆ ಆದಲ್ಲಿ ಬೆಂಗಳೂರಿನಲ್ಲೂ ಸದ್ಯದಲ್ಲೇ ಬಾಡಿಗೆ ಸೈಕಲ್ ಯೋಜನೆ ಜಾರಿಗೆ ಬರಲಿದ್ದು, ಪರಿಸರ ಸ್ನೇಹಿಗಳು ಕೂಡಾ ಈ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅನಗತ್ಯವಾಗಿ ವಾಹನವಾಗಿ ಬಳಕೆ ಕಡಿಮೆ ಮಾಡಿ ಸೈಕಲ್ ಉಪಯೋಗಿಸಿದರೆ ಮಾಲಿನ್ಯ ತಡೆಗೆ ಸಹಕಾರಿಯಾಗಲಿದೆ.
ಎಪ್ರಿಲಿಯಾ ರೇಸ್ ಎಸ್ಆರ್ 150 ಸ್ಕೂಟರ್ ಚಿತ್ರಗಳನ್ನು ವೀಕ್ಷಿಸಲು ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.


Click it and Unblock the Notifications








