ಇವಿ ಸ್ಕೂಟರ್ಗಳಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣ ಪತ್ತೆಹಚ್ಚಿದ ಕೇಂದ್ರದ ವಿಶೇಷ ತಂಡ
ಭಾರತವನ್ನು ಮಾಲೀನ್ಯ ಮುಕ್ತ ಪರಿಸರವನ್ನಾಗಿಸಲು ಕೇಂದ್ರ ಸರ್ಕಾರ ಇವಿ ವಾಹನಗಳ ಬಳಕೆಗೆ ಉತ್ತೇಜನ ನೀಡುತ್ತಿದ್ದರೆ, ಮತ್ತೊಂದೆಡೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಬೆಂಕಿ ಹಾಗೂ ಸ್ಟೋಟಗೊಳ್ಳುತ್ತಿರುವ ಸ್ಕೂಟರ್ಗಳಿಂದಾಗಿ ಜನರು ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹಿಂಜರಿಯುತ್ತಿದ್ದಾರೆ.

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಅಗ್ನಿ ಅವಘಡಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಇದರಿಂದ ಸದ್ಯ ಇವಿ ದ್ವಿಚಕ್ರ ವಾಹನ ಮಾರಾಟದಲ್ಲಿ ಭಾರಿ ಹಿನ್ನಡೆಯಾಗಿದೆ. ಅಲ್ಲದೇ ಎಲೆಕ್ಟ್ರಿಕ್ ಮೋಟಾರ್ಸೈಕಲ್ ಬೆಂಕಿ ಅವಘಡಗಳು ಸಾಕಷ್ಟು ವಿವಾದಕ್ಕೆ ಕಾರಣವಾಗಿವೆ. ದೇಶದಲ್ಲಿ ಸಂಭವಿಸಿರುವ ಬಹುತೇಕ ಬೆಂಕಿ ಘಟನೆಗಳು ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಆಧರಿಸಿವೆ.

ಎಲ್ಲ ವರ್ಗದ ಜನರೂ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಕ್ಷಿಪ್ರಗತಿಯಲ್ಲಿ ಬದಲಾಗುತ್ತಿದ್ದ ಸಂಧರ್ಭದಲ್ಲಿ ಬೆಂಕಿ ಅವಘಡಗಳು ಇವಿ ಭವಿಷ್ಯವನ್ನು ಸ್ಥಗಿತಗೊಳಿಸಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಬೆಂಕಿ ಅವಘಡಗಳಿಗೆ ಕಾರಣಗಳನ್ನು ಅಧ್ಯಯನ ಮಾಡಲು ಸಮಿತಿಯೊಂದನ್ನು ರಚಿಸಿ ಆದಷ್ಟು ಬೇಗ ವಿವರಣೆ ನೀಡಲು ಕಳೆದ ತಿಂಗಳಿನಲ್ಲಿ ಸೂಚಿಸಿತ್ತು.

ಈ ಸಂಬಂಧ ತೀವ್ರ ಸಂಶೋಧನೆಯಲ್ಲಿ ತೊಡಗಿದ್ದ ತಂಡ ತನ್ನ ಮೊದಲ ಹಂತದ ಸಂಶೋಧನೆಯ ಮೂಲಕ ಆಘಾತಕಾರಿ ಮಾಹಿತಿಯನ್ನು ಹೊರಹಾಕಿದೆ. ಅಂದರೆ, ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಹಠಾತ್ ಬೆಂಕಿಗೆ ಮುಖ್ಯ ಕಾರಣವನ್ನು ಬಹಿರಂಗಪಡಿಸಿದೆ. ಬ್ಯಾಟರಿ ಸೆಲ್ಗಳ ವಿನ್ಯಾಸದಲ್ಲಿನ ಸಮಸ್ಯೆಗಳಿಂದಾಗಿ ಎಲೆಕ್ಟ್ರಿಕ್ ಮೋಟಾರ್ಸೈಕಲ್ಗಳಿಗೆ ಬೆಂಕಿ ಹತ್ತಿಕೊಂಡಿದೆ ಎಂದು ತಂಡವು ಕಂಡುಕೊಂಡಿದೆ.

ಇದು ಬಹುತೇಕ ಎಲ್ಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೆಂಕಿಗೆ ಕಾರಣ ಎಂದು ಹೇಳಲಾಗುತ್ತಿದೆ. ಓಕಿನಾವಾ ಆಟೋಟೆಕ್, ಬೂಮ್ ಮೋಟಾರ್, ಪ್ಯೂರ್ ಇವಿ, ಜಿತೇಂದ್ರ ಇವಿ ಮತ್ತು ಓಲಾ ಎಲೆಕ್ಟ್ರಿಕ್ನ ವಾಹನಗಳಲ್ಲಿ ಈ ಹಿಂದೆ ಬೆಂಕಿ ಕಾಣಿಸಿಕೊಂಡಿತ್ತು. ಬ್ಯಾಟರಿ ಸೆಲ್ಗಳಲ್ಲಿನ ದೋಷ ಮತ್ತು ಬ್ಯಾಟರಿ ವಿನ್ಯಾಸದಲ್ಲಿ ಕಳಪೆ ಗುಣಮಟ್ಟವನ್ನು ಕೇಂದ್ರದ ತಂಡ ಪತ್ತೆಹಚ್ಚಿದೆ.

ತೆಲಂಗಾಣದಲ್ಲಿ ಚಾರ್ಜ್ ಆಗುವ ವೇಳೆ 80 ವರ್ಷದ ವೃದ್ಧ ಸಾವನ್ನಪ್ಪಿದರೆ, ಆತನ ಮಗ ಮತ್ತು ಮಗಳು ತೀವ್ರವಾಗಿ ಗಾಯಗೊಂಡಿದ್ದರು, ನಿಲ್ಲಿಸಿದ ಎಲೆಕ್ಟ್ರಿಕ್ ವಾಹನಗಳು ಇದ್ದಕ್ಕಿದ್ದಂತೆ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡ ಘಟನೆಗಳೂ ದೇಶದಲ್ಲಿ ವರದಿಯಾಗಿವೆ. ಇದಲ್ಲದೇ ಕಂಟೈನರ್ಗಳಲ್ಲಿ ಇವಿ ವಾಹನಗಳನ್ನು ತುಂಬಿ ಶೋ ರೂಂಗೆ ಸಾಗಿಸುತ್ತಿದ್ದ ಎಲೆಕ್ಟ್ರಿಕ್ ವಾಹನಗಳು ಸಹ ಬೆಂಕಿಗೆ ಆಹುತಿಯಾಗಿದ್ದವು.

ಈ ಎಲ್ಲಾ ಘಟನೆಗಳು ದೇಶವನ್ನೇ ಬೆಚ್ಚಿಬೀಳಿಸಿದ್ದವು. ಈ ಘಟನೆಯ ನಂತರ ಸರ್ಕಾರವು ಇದನ್ನು ಗಂಭೀರವಾಗಿ ಪರಿಗಣಿಸಿ ಇವಿ ವಾಹನ ತಯಾರಕರ ಸಭೆ ನಡೆಸಿ ಎಚ್ಚರಿಕೆ ನೀಡಿ ಕ್ರಮ ತೆಗೆದುಕೊಂಡಿತ್ತು. ಬಳಿಕ ವಾಹನ ತಯಾರಕರು ಸಂಭವನೀಯ ಅವಘಡಗಳಿಗೂ ಮುನ್ನವೇ ಲೋಪ-ದೋಷಗಳನ್ನು ಸರಿಪಡಿಸಲು ಗ್ರಾಹಕರಿಂದ ವಾಹನಗಳನ್ನು ಹಿಂಪಡೆದಿದ್ದರು.

ಪ್ರಸ್ತುತ ಎಲೆಕ್ಟ್ರಿಕ್ ವಾಹನಗಳಲ್ಲಿ ಕುಳಿತರೆ ಬಾಂಬ್ ಮೇಲೆ ಕುಳಿತಂತೆ ಭಾಸವಾಗುವಂತೆ ಮಾಡಿದೆ. ಸದ್ಯ ಗ್ರಾಹಕರಿಗೆ ಎಲೆಕ್ಟ್ರಿಕ್ ವಾಹನಗಳ ಮೇಲಿದ್ದ ನಂಬಿಕೆ ಹುಸಿಗೊಳ್ಳುತ್ತಿದೆ. ದೇಶವನ್ನು ಸಂಪೂರ್ಣ ಹಸಿರು ಆಂದೋಲನದತ್ತ ಕೊಂಡೊಯ್ಯುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಯತ್ನಕ್ಕೆ ಸದ್ಯ ಬ್ರೇಕ್ ಬಿದ್ದಂತಾಗಿದೆ.

ಆದರೂ ಇವಿ ವಾಹನಗಳಿಗೆ ಮತ್ತೊಮ್ಮೆ ಬೇಡಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರಗಳು ಲೋಪದೋಷಗಳನ್ನು ಕಂಡುಕೊಂಡು ಪ್ರಮಾಣಿತ ಬ್ಯಾಟರಿಗಳ ತಯಾರಿಸಿ ಮಾಲೀನ್ಯ ಮುಕ್ತ ಪರಿಸರಕ್ಕೆ ಪಣತೊಟ್ಟಿವೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಶೀಘ್ರದಲ್ಲೇ ಎಲೆಕ್ಟ್ರಿಕ್ ವಾಹನ ಉತ್ಪಾದನೆಗೆ ಮಾರ್ಗಸೂಚಿಗಳನ್ನು ಹೊರಡಿಸಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಖಚಿತಪಡಿಸಿದ್ದಾರೆ.

ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸದ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಪ್ರಸ್ತುತದ ಸನ್ನಿವೇಶದಲ್ಲಿ ಯಾವುದೇ ಇವಿ ವಾಹನಗಳನ್ನು ಬಿಡುಗಡೆ ಮಾಡುವುದು ಸೂಕ್ತವಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿದ್ದು, ಈ ಬಗ್ಗೆ ಅಧಿಕೃತ ಸೂಚನೆ ಹೊರಬರಬೇಕಿದೆ.

ಇವಿ ವಾಹನಗಳಿಗೆ ವಿಮೆ
ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಕಡ್ಡಾಯ ವಿಮೆಗೆ ನಿರ್ದೇಶನಗಳನ್ನು ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾದ ಮನವಿಯ ಮೇರೆಗೆ ದೆಹಲಿ ಹೈಕೋರ್ಟ್ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ರಜತ್ ಕಪೂರ್ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ವಕೀಲ ಆರ್.ಕೆ. ಕಪೂರ್, ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 146ರ ಅಡಿಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ವಿಮಾ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಪ್ರತಿವಾದಿಗಳನ್ನು ಕೋರಿದರು.

"EV ಗರಿಷ್ಠ 25 ಕಿಮೀ ವೇಗ ಮತ್ತು 250 ವ್ಯಾಟ್ಗಳವರೆಗೆ ಶಕ್ತಿಯನ್ನು ಹೊಂದಿರುವ ದ್ವಿಚಕ್ರ ವಾಹನವಾಗಿದ್ದರೆ, ಅದು ಕಾರ್ಯನಿರ್ವಹಿಸಲು ಚಾಲನಾ ಪರವಾನಗಿಯ ಅಗತ್ಯವಿರುವುದಿಲ್ಲ. ಆದಾಗ್ಯೂ, ಕನಿಷ್ಠ ಮೂರನೇ ವ್ಯಕ್ತಿಯ ಅಪಾಯಗಳನ್ನು ಸರಿದೂಗಿಸಲು ವಿಮಾ ರಕ್ಷಣೆಗೆ ಒಂದು ನಿಬಂಧನೆ ಇರಬೇಕು, "ಎಂದು ಕಪೂರ್ ವಾದಿಸಿದರು.

"ಚಾರ್ಜ್ ಮಾಡುವಾಗ ಅಥವಾ ಇನ್ನಾವುದೇ ರೀತಿಯಲ್ಲಿ ಬೆಂಕಿ ತಗುಲದ ವಿಶ್ವಾಸಾರ್ಹ ಮತ್ತು ದೀರ್ಘಕಾಲೀನ ಬ್ಯಾಟರಿಗಳ ಪ್ರಮಾಣಿತ ಉತ್ಪಾದನೆಯನ್ನು ಖಚಿತಪಡಿಸಿಕೊಳ್ಳಲು" ಮಾರ್ಗಸೂಚಿಗಳನ್ನು ನೀಡಲು ಸೂಕ್ತ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದರು.


Click it and Unblock the Notifications








