ಪೊಲೀಸರ ಸಹಾಯವಿಲ್ಲದೇ ಕಳುವಾದ ಬೈಕ್ ಪತ್ತೆ ಹಚ್ಚಿದ ಯುವಕ
ತಮಿಳು ಚಿತ್ರರಂಗದ ಸೂಪರ್ಸ್ಟಾರ್ ರಜನಿಕಾಂತ್ರವರ ಅಳಿಯ ಧನುಷ್ ಅಭಿನಯದ ಜನಪ್ರಿಯ ಚಿತ್ರಗಳಲ್ಲಿ ಪೊಲ್ಲಾಧವನ್ ಚಿತ್ರವು ಒಂದು. ಈ ಚಿತ್ರವನ್ನು ಬಜಾಜ್ ಪಲ್ಸರ್ ಬೈಕಿನ ಮೇಲೆ ನಿರ್ಮಿಸಲಾಗಿತ್ತು. ಈ ಚಿತ್ರದಲ್ಲಿ ಧನುಷ್ರವರು ಪಲ್ಸರ್ ಬೈಕ್ ಅನ್ನು ಖರೀದಿಸುತ್ತಾರೆ.

ಅವರು ಖರೀದಿಸುವ ಬೈಕ್ ಅನ್ನು ಕದಿಯುವ ಖಳರು ಅದನ್ನು ಕಳ್ಳತನ ಮಾಡಲು ಹಾಗೂ ಕೊಲೆ ಮಾಡಲು ಬಳಸುತ್ತಾರೆ. ಬೈಕ್ ಕಳ್ಳತನವಾಗಿರುವ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದರೂ, ಪೊಲೀಸರು ಯಾವುದೇ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ. ಧನುಷ್ರವರು ತಮ್ಮ ಸ್ನೇಹಿತರ ನೆರವಿನೊಂದಿಗೆ ಕಳುವಾದ ಬೈಕ್ ಅನ್ನು ವಾಪಸ್ ಪಡೆಯುತ್ತಾರೆ.

ಇದೇ ರೀತಿಯ ಘಟನೆಯೊಂದು ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಆದರೆ ಈ ಘಟನೆಯಲ್ಲಿ ಬೈಕ್ ಕಳೆದುಕೊಂಡಿದ್ದ ಯುವಕ ಪೊಲೀಸರ ಸಹಾಯವಿಲ್ಲದೇ ತನ್ನ ಬೈಕ್ ಅನ್ನು ಮರಳಿ ಪಡೆಯುತ್ತಾನೆ. ಈ ಘಟನೆಯಲ್ಲಿಯೂ ಸಹ ಪಲ್ಸರ್ ಬೈಕ್ ಅನ್ನು ಕಳುವು ಮಾಡಲಾಗಿತ್ತು.

ಸಂತೋಷ್ ಎಂಬ ಯುವಕನೇ ಬೈಕ್ ಕಳೆದು ಕೊಂಡ ಯುವಕ. ಸಂತೋಷ್ ಚೆನ್ನೈನಲ್ಲಿರುವ ಖಾಸಗಿ ಆನ್ಲೈನ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಅವರು ಪೊಂಗಲ್ ಹಬ್ಬದ ಹಿನ್ನೆಲೆಯಲ್ಲಿ ತಮ್ಮ ಊರಾದ ಧರ್ಮಪುರಿಗೆ ತೆರಳಿದ್ದರು.

ಧರ್ಮಪುರಿಗೆ ತೆರಳಿದ್ದಾಗ ತಮ್ಮ ಬೈಕ್ ಅನ್ನು ಚೆನ್ನೈನಲ್ಲಿಯೇ ಬಿಟ್ಟು ತೆರಳಿದ್ದರು. ಸಂತೋಷ್ ತಮ್ಮ ಊರಿನಲ್ಲಿದ್ದಾಗ ಅವರ ಮೊಬೈಲಿಗೆ ಅವರ ಬೈಕ್ ಅನ್ನು ಬೇರೊಬ್ಬರು ಬಳಸುತ್ತಿರುವ ಬಗ್ಗೆ ಎಸ್ಎಂಎಸ್ಗಳು ಬಂದಿವೆ. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡಬಹುದು.

ಸಂತೋಷ್ ತಮ್ಮ ಪಲ್ಸರ್ ಬೈಕಿನಲ್ಲಿ ಜಿಪಿಎಸ್ ಅಳವಡಿಸಿದ್ದರು. ಇದರಿಂದಾಗಿ ಬೈಕ್ ನಿಗದಿಪಡಿಸಿರುವ ದೂರಕ್ಕಿಂತ ಹೆಚ್ಚು ಸಂಚರಿಸಿದರೆ ಅಥವಾ ಮಾಲೀಕರ ಬದಲು ಬೇರೊಬ್ಬರು ಈ ಬೈಕ್ ಅನ್ನು ಬಳಸಿದರೆ ಮೊಬೈಲಿಗೆ ಎಸ್ಎಂಎಸ್ಗಳು ಬರುತ್ತವೆ.

ಜಿಪಿಎಸ್ ಬೈಕ್ ಇರುವ ಸ್ಥಳದ ಮಾಹಿತಿಯನ್ನು ಸಹ ನೀಡುತ್ತದೆ. ಸಂತೋಷ್ರವರು ಈ ಸಿಸ್ಟಂ ಅನ್ನು ತಮ್ಮ ಬೈಕಿನಲ್ಲಿ ಅಳವಡಿಸಿದ್ದ ಕಾರಣ ಪೊಲೀಸರ ಸಹಾಯವಿಲ್ಲದೇ ಕಳುವಾಗಿದ್ದ ತಮ್ಮ ಬೈಕ್ ಅನ್ನು ಮರಳಿ ಪಡೆದಿದ್ದಾರೆ.

ಸಂತೋಷ್ ಊರಿನಲ್ಲಿದ್ದಾಗ ಬೈಕ್ ಕಳುವಾಗಿರುವ ಬಗ್ಗೆ 18ನೇ ತಾರೀಕಿನಂದು ಬೆಳಿಗ್ಗೆ 2 ಗಂಟೆಯ ವೇಳೆಗೆ ಎಮರ್ಜೆನ್ಸಿ ಮೆಸೇಜ್ಗಳು ಬಂದಿವೆ. ಮೊದಲು ಇದನ್ನು ಗಂಭೀರವಾಗಿ ಪರಿಗಣಿಸದ ಸಂತೋಷ್ರವರು ತಮ್ಮ ಬೈಕ್ ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ.

ಬೈಕ್ ಮೈಲಾಪುರದಲ್ಲಿರುವ ಅಬಿರಾಮಪುರಂನಲ್ಲಿ ನಿಂತ ನಂತರ ಬೈಕಿನಲ್ಲಿ ಅಳವಡಿಸಲಾಗಿದ್ದ ಜಿಪಿಎಸ್ನಲ್ಲಿದ್ದ ಎಮರ್ಜೆನ್ಸಿ ಆಫ್ ಫೀಚರ್ನಿಂದ ಬೈಕ್ ಅನ್ನು ಆಫ್ ಮಾಡಿದ್ದಾರೆ. ಈ ಫೀಚರ್ ಬೈಕ್ ಅನ್ನು ಹೆಚ್ಚು ದೂರ ಚಲಿಸದಂತೆ ಮಾಡುತ್ತದೆ. ಇದನ್ನು ಒಟಿಪಿ ನೆರವಿನೊಂದಿಗೆ ಮಾಡಬೇಕಾಗುತ್ತದೆ.

ಮರುದಿನ ಸಂತೋಷ್ರವರು 100 ನಂಬರಿಗೆ ಕರೆಮಾಡಿ ಪೊಲೀಸರಿಗೆ ಬೈಕ್ ಕಳುವಾಗಿರುವ ಬಗ್ಗೆ ಮಾಹಿತಿ ನೀಡುತ್ತಾರೆ. ಪೊಲೀಸರು ಸ್ಥಳದಲ್ಲಿದ್ದ ಸಿಸಿಟಿವಿ ಫೂಟೇಜ್ಗಳನ್ನು ಪರಿಶೀಲಿಸಿದ ನಂತರ ನವೀನ್ ಹಾಗೂ ನಾಗರಾಜ್ ಎಂಬುವವರು ಬೈಕ್ಗಳನ್ನು ಕದ್ದಿರುವುದು ಕಂಡು ಬರುತ್ತದೆ.

ಸಂತೋಷ್ರವರು ದೂರು ನೀಡಲು ಅಬಿರಾಮ್ಪುರ ಪೊಲೀಸ್ ಠಾಣೆಗೆ ತೆರಳಿದಾಗ ಅಲ್ಲಿನ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ. ಬೈಕ್ ಕಳುವಾಗಿರುವುದು ಸೈದಾಪೇಟ್ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವುದರಿಂದ ಅಲ್ಲಿಗೆ ತೆರಳಿ ದೂರು ನೀಡಲು ಸೂಚಿಸಿದ್ದಾರೆ.

ಸೈದಾಪೇಟ್ ಪೊಲೀಸರು ಬೈಕ್ ಕದ್ದಿರುವವರು ಕೊಟ್ಟುರುಪುರಂಗೆ ಸೇರಿದವರಾದ ಕಾರಣಕ್ಕೆ ಅಲ್ಲಿಗೆ ತೆರಳಿ ದೂರು ನೀಡುವಂತೆ ಹೇಳಿದ್ದಾರೆ. ಸಂತೋಷ್ರವರು ಕೊಟ್ಟುರುಪುರಂಗೂ ಸಹ ತೆರಳಿ ಅಲ್ಲಿನ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಅಲ್ಲಿದ್ದ ಪೊಲೀಸರು ಬೈಕ್ ಕದ್ದವರ ಪರವಾಗಿಯೇ ಮಾತನಾಡಿದ್ದಾರೆ. ನಂತರ ಬೈಕಿನಲ್ಲಿದ್ದ ಜಿಪಿಎಸ್ ಸಹಾಯದಿಂದ ಕಳುವಾಗಿದ್ದ ತಮ್ಮ ಬೈಕ್ ಅನ್ನು ವಾಪಸ್ ಪಡೆದಿದ್ದಾರೆ. ಕದ್ದವರು ಮುಂದೆ ಚಲಿಸಲಾಗದೇ ಬೈಕ್ ಅನ್ನು ನಿಲ್ಲಿಸಿ ಹೋಗಿದ್ದರು. ಅಲ್ಲಿಗೆ ತೆರಳಿ ಬೈಕ್ ಅನ್ನು ವಾಪಸ್ ತಂದಿದ್ದಾರೆ.

ಸಂತೋಷ್ರವರಂತೆಯೇ ಹಲವಾರು ಮಂದಿ ತಮ್ಮ ಬೈಕ್ಗಳಲ್ಲಿ ಜಿಪಿಎಸ್ ಅಳವಡಿಸಿಕೊಂಡು ಕಳುವಾಗಿದ್ದ ತಮ್ಮ ಬೈಕ್ಗಳನ್ನು ಪತ್ತೆ ಹಚ್ಚಿದ್ದಾರೆ. ಈ ಜಿಪಿಎಸ್ಗಳು ಮಾರುಕಟ್ಟೆಯಲ್ಲಿ ರೂ.2,000ಗಳಿಗೆ ಮಾರಾಟವಾಗುತ್ತವೆ. ಬೈಕ್ ಕಳುವಾಗದಂತೆ ತಡೆಯಲು ಜಿಪಿಎಸ್ಗಳನ್ನು ತಮ್ಮ ವಾಹನಗಳಲ್ಲಿ ಅಳವಡಿಸಿಕೊಂಡರೆ ಒಳ್ಳೆಯದು.


Click it and Unblock the Notifications








